ದೊಡ್ಡಬಳ್ಳಾಪುರ, (ಆಗಸ್ಟ್.06); ತಾಲೂಕು ಮಟ್ಟದ ಎಲ್ಲಾ ಕಾರ್ಯಕ್ರಮಗಳು ಕೇವಲ ನಗರ ವ್ಯಾಪ್ತಿಗೆ ಮಾತ್ರ ಸೀಮಿತವಾಗುತ್ತಿವೆ ಎಂಬ ಆರೋಪದ ಬೆನ್ನಲ್ಲೇ, ಇದೇ ತಿಂಗಳ 07 ರಂದು ತಾಲ್ಲೂಕಿಗೆ ಕರ್ನಾಟಕ ಸಂಭ್ರಮ 50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಕನ್ನಡ ಜ್ಯೋತಿ ರಥ ಆಗಮಿಸಲಿದೆ.
ದೇವನಹಳ್ಳಿ ತಾಲ್ಲೂಕಿನಿಂದ ಆಗಮಿಸುವ ಕನ್ನಡ ರಥವನ್ನು ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ದೇವನಹಳ್ಳಿ ತಾಲ್ಲೂಕಿನ ಗಡಿಭಾಗದಲ್ಲಿ ಸ್ವಾಗತಿಸಲಾಗುತ್ತದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಕನ್ನಡ ಜ್ಯೋತಿ ರಥ ತಾಲ್ಲೂಕಿನಲ್ಲಿ ಸಂಚರಿಸುವ ಬಗ್ಗೆ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಜ್ಯೋತಿ ರಥದ ಬಾಶೆಟ್ಟಹಳ್ಳಿಯಿಂದ ಪ್ರಾರಂಭವಾಗುತ್ತದೆ. ನಂತರ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣ ವೃತ್ತ, ಡಿ ಕ್ರಾಸ್, ರಂಗಪ್ಪ ಸರ್ಕಲ್, ಅರಳುಮಲ್ಲಿಗೆ ಬಾಗಿಲು, ಎಂ.ಎಸ್.ವಿ ಶಾಲೆ, ಕೊಂಗಾಡಿಯಪ್ಪ ಪ್ರೌಢಶಾಲೆ, ತಾಲ್ಲೂಕು ಕಛೇರಿ ವೃತ್ತ,ಬಸವ ಭವನ ತನಕ ಸಂಚರಿಸಲಿದೆ.
ನಂತರ ದೊಡ್ಡಬಳ್ಳಾಪುರ ನಗರದಿಂದ ದೊಡ್ಡಬೆಳವಂಗಲ ಮೂಲಕ ಮಧುರೆ ಹೋಬಳಿಯ ಕನಸವಾಡಿಗೆ ತಲುಪುತ್ತದೆ. ಆ.8 ರಂದು ಗುರುವಾರ ಬೆಳಗ್ಗೆ 9 ಗಂಟೆಗೆ ಕನಸವಾಡಿಯಿಂದ ನೆಲಮಂಗಲ ತಾಲ್ಲೂಕಿಗೆ ಬೀಳ್ಕೊಡಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬಿದ ನಿಮಿತ್ತ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಡಿಸಿರುವ ಕರ್ನಾಟಕ ಸಂಭ್ರಮ-50 ರ ಕನ್ನಡ ಜ್ಯೋತಿ ರಥದ ಮೆರವಣಿಗೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಆಡಳಿತ ಹಾಗೂ ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವರು.
ಮಹಿಳಾ ಸಂಘಗಳಿಂದ ಪೂರ್ಣ ಕುಂಭ ಸ್ವಾಗತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳು ಸಾಂಸ್ಕೃತಿಕ ಮೆರಗು ನೀಡಲಿವೆ ಎಂದರು.
ಪೂರ್ವ ಸಿದ್ದತಾ ಸಭೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು,ಕನ್ನಡಪರ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.
ನಗರ ವ್ಯಾಪ್ತಿಗೆ ಸೀಮಿತವೇ..?; ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಚರಿಸಲಾಗುವ ಎಲ್ಲಾ ಕಾರ್ಯಕ್ರಮಗಳು ನಗರ, ಬಾಶೆಟ್ಟಿಹಳ್ಳಿ ಹೆಚ್ಚೆಂದರೆ ಮಧುರೆ, ದೊಡ್ಡಬೆಳವಂಗಲ ವ್ಯಾಪ್ತಿಗೆ ಮಾತ್ರ ಸೀಮಿತವಾಗುತ್ತಿದ್ದು, ಅಧಿಕಾರಿಗಳು ನಗರ ವ್ಯಾಪ್ತಿಗೆ ಬಿಟ್ಟು ಗ್ರಾಮಾಂತರ ಭಾಗದ ಕಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿಲ್ಲ ಎಂಬ ಆರೋಪ ಹೆಚ್ಚಾಗಿದೆ.
ಇದರಿಂದಾಗಿ ತಾಲೂಕಿನ ತೂಬಗೆರೆ, ಹಾಡೋನಹಳ್ಳಿ, ಘಾಟಿ ಸುಬ್ರಹ್ಮಣ್ಯ, ಕಂಟನಕುಂಟೆ, ಗೊಲ್ಲಹಳ್ಳಿ, ಗುಂಡಮಗೆರೆ, ಹೊಸಹಳ್ಳಿ, ಆರೂಢಿ, ಸಾಸಲು, ಭಕ್ತರಹಳ್ಳಿ, ಸಕ್ಕರೆಗೊಲ್ಲಹಳ್ಳಿ, ಹಣಬೆ, ತಿಪ್ಪೂರು ವ್ಯಾಪ್ತಿಯನ್ನು ಕಡೆಗಣಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ಈ ವ್ಯಾಪ್ತಿಯಲ್ಲಿ ತೆಲುಗು ಭಾಷೆ ಬಳಕೆ ಸ್ವಲ್ಪ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ತಾಲೂಕಿನ ಸಾಧ್ಯವಾದಷ್ಟು ಈ ವ್ಯಾಪ್ತಿಯಲ್ಲಿನ ಗ್ರಾಮಪಂಚಾಯಿತಿಗಳನ್ನು ಒಳಗೊಂಡಂತೆ ಏರ್ಪಡಿಸಿದರೆ ಮತ್ತಷ್ಟು ಸಂಭ್ರಮ ಹೆಚ್ಚಾಗುತ್ತದೆ. ಆದರೆ ಅಧಿಕಾರಿಗಳಿಗೆ ಇದರ ಬಗ್ಗೆ ಆಸಕ್ತಿ ಇಲ್ಲವಾಗುತ್ತಿದೆಯೇ ಎಂಬ ಬೇಸರವನ್ನು ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಗಂಗರಾಜ ಶಿರವಾರ ಹೊರಹಾಕಿದ್ದಾರೆ.
ನಾಡು ನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದ ಜನರನ್ನು ಹೆಚ್ಚು ಹೆಚ್ಚಾಗಿ ಒಳಪಡಿಸಿಕೊಂಡು, ಕನ್ನಡದ ಕಂಪನ್ನು ಪಸರಿಸಬೇಕಿದೆ. ಈ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಮುಕ್ತವಾಗಿ ಸಹಕಾರ ನೀಡುವ ವಿಶ್ವಾಸವಿದೆ.
ಸಮಯದ ಕೊರತೆ ನೆಪದಲ್ಲಿ ಅಧಿಕಾರಿಗಳು ನಗರ ವ್ಯಾಪ್ತಿಗೆ ಸೀಮಿತವಾದರೆ ಇಂತಹ ಮಹತ್ತರವಾದ ಕಾರ್ಯಕ್ರಮಗಳ ಮಾಹಿತಿ ಗ್ರಾಮೀಣ ಪ್ರದೇಶದ ಜನರಿಗೆ ತಿಳಿಯುವುದು ಹೇಗೆ..?, ಕೇವಲ ಸಂಪನ್ಮೂಲ ಇರುವ ಗ್ರಾಮಪಂಚಾಯಿತಿಗಳನ್ನು ಮಾತ್ರ ಈ ರೀತಿಯ ಕಾರ್ಯಕ್ರಮಗಳು ಸೀಮೀತವಾದರೆ ಕಾರ್ಯಕ್ರಮದ ಉದ್ದೇಶ ಸಾಕಾರವಾಗುತ್ತದೆಯೇ..? ಈ ನಿಟ್ಟಿನಲ್ಲಿ ಅಧಿಕಾರಿಗಳು ಜಾಗ್ರತೆವಹಿಸಬೇಕೆಂದು ಗಂಗರಾಜ ಶಿರವಾರ ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….