ದೊಡ್ಡಬಳ್ಳಾಪುರ: ಪ್ರತಿಯೊಬ್ಬ ಸರ್ಕಾರಿ ನೌಕರರ ಹಿತ ಕಾಯುವುದೇ ಸರ್ಕಾರಿ ನೌಕರರ ಸಂಘದ ಮೂಲ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿಎಸ್ ಷಡಕ್ಷರಿ (cs shadakshari) ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ 2024 – 29ರ ಅವಧಿಗೆ ಆಯ್ಕೆಯಾದ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ನೌಕರರು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ನಾವು ಸರ್ಕಾರದಿಂದ ಪಡೆಯುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ದೊಡ್ಡಬಳ್ಳಾಪುರ ತಾಲೂಕು ನೌಕರರ ಸಂಘದ ಭವನ ಯಾವುದೇ ಜಿಲ್ಲಾ ಸಂಘದ ನೌಕರರ ಭವನಕ್ಕಿಂತ ಕಡಿಮೆ ಇಲ್ಲ, ತಾಲೂಕು ಅಧ್ಯಕ್ಷರ ಬೇಡಿಕೆಯಂತೆ ಒಂದು ವರ್ಷದ ಒಳಗೆ ಸುಮಾರು ಒಂದು ಕೋಟಿ ಅನುದಾನದಲ್ಲಿ ಭವನದ ಸಂಪೂರ್ಣ ಕೆಲಸವನ್ನು ಮುಗಿಸುತ್ತೇನೆ ಎಂದರು.
ನೂತನವಾಗಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಎಂಎಸ್ ರಾಜಶೇಖರ್ ಮಾತನಾಡಿ, ನಮ್ಮ ತಾಲೂಕು ಸಂಘವನ್ನು ಮಾದರಿ ತಾಲೂಕು ಸಂಘವನ್ನಾಗಿ ಮಾಡಲು ಕಾಯ, ವಾಚಾ, ಮನಸಾ ಶ್ರಮಿಸುತ್ತೇನೆ.
ನೌಕರರ ಏನೇ ಸಮಸ್ಯೆಗಳಿದ್ದರೂ ರಾಜ್ಯ ಸಂಘದ ಸಹಕಾರದೊಂದಿಗೆ ಬಗೆಹರಿಸುತ್ತೇನೆ ಎಂದ ಅವರು, ಸರ್ಕಾರಿ ನೌಕರರ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಇದನ್ನು ಪೂರ್ಣ ಮುಗಿಸಲು ರಾಜ್ಯಾಧ್ಯಕ್ಷರ ಸಹಕಾರದೊಂದಿಗೆ ಒಂದು ಕೋಟಿ ಅನುದಾನವನ್ನು ತಂದು ನೌಕರ ಭವನದ ಕೆಲಸವನ್ನು ಸಂಪೂರ್ಣ ಗೊಳಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಂಘದ ಹಿರಿಯ ಉಪಾಧ್ಯಕ್ಷರಾದ ಬಸವರಾಜ್, ಕಾರ್ಯದರ್ಶಿ ನೆಲಗುಂದ್ರಿ ಸದಾನಂದಪ್ಪ, ಗಿರಿ ಗೌಡ, ಹರ್ಷ ಚೇತನ್ ಪಾಂಡು, ತಾಲೂಕು ಗೌರವಾಧ್ಯಕ್ಷ ರಾಮಾಂಜಿನಪ್ಪ, ನಿಕಟ ಪೂರ್ವ ಅಧ್ಯಕ್ಷ ರಾಮಕೃಷ್ಣಯ್ಯ ರಾಜ್ಯ ಪರಿಷತ್ ಸದಸ್ಯ ಹರೀಶ್, ತಾಲೂಕು ಕಾರ್ಯದರ್ಶಿ ಧನಂಜಯ, ಮುಕೇಶ್ ಬಾಬು, ವಿವಿಧ ವೃಂದ ಸಂಘದ ಅಧ್ಯಕ್ಷರುಗಳು, ನಿರ್ದೇಶಕರುಗಳು ಇದ್ದರು.