ದೊಡ್ಡಬಳ್ಳಾಪುರ: 2021 ಜಿಲ್ಲೆಯ ಜನರಿಗೆ ಸಿಹಿಗಿಂತಲು ಕಹಿ ಅನುಭವಗಳೇ ಹೆಚ್ಚಾಗಿದ್ದು, ಆತ್ಮೀಯರನ್ನು ಕಳೆದುಕೊಂಡ ದುಖಃ ಎಲ್ಲರನ್ನು ಕಾಡತೊಡಗಿದೆ. ಆದರೆ ವರ್ಷದ ಕೊನೆಯಲ್ಲಿ ಬಿದ್ದ ಮಳೆಯಿಂದಾಗಿ ಒಂದಿಷ್ಟು ಬೆಳೆ ನಷ್ಟವಾಗಿದ್ದರು ದಶಕಗಳಿಂದಲು ಖಾಲಿಯಾಗಿದ್ದ ಕೆರೆಗಳು ತುಂಬಿ ಕೋಡಿ ಹರಿದಿದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡುವಂತಾಗಿದ್ದರೆ, ಕುಡಿಯುವ ನೀರಿನ ಬವಣೆ ನೀಗಲಿದೆ ಎನ್ನುವ ಖುಷಿ ಸಾರ್ವಜನಿಕರದ್ದು.
ಏಪ್ರಿಲ್ ಕೊನೆಯ ವಾರದಲ್ಲಿ ಆರಂಭವಾದ ಕೋವಿಡ್-19 ಎರಡನೇ ಅಲೆಯು ಮೇ ತಿಂಗಳಲ್ಲಿ ತೀವ್ರಗೊಂಡಾಗ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ಬೆಡ್ ಸೌಲಭ್ಯ, ಜಿವರಕ್ಷವಾಗಿದ್ದ ಆಮ್ಲಜನಕ ದೊರೆಯದೇ ರೋಗಿಗಳು ಪರದಾಡುವಂತಾಗಿತ್ತು. ಬಡವ, ಶ್ರೀಮಂತ ಅನ್ನುವ ತಾರತಮ್ಯ ಇಲ್ಲದೆ ಕೋವಿಡ್ ಎರಡನೇ ಅಲೆಯಲ್ಲಿ ಹಿರಿಯರಿಗಿಂತಲು ದೈಹಿಕವಾಗಿ ಗಟ್ಟಿಮುಟ್ಟಾಗಿದ್ದ ಯುವಕರು ಸಹ ಬೆಳಿಗ್ಗೆ ಇದ್ದವರು ಸಂಜೆ ವೇಳೆಗೆ ಪ್ರಾಣ ಬಿಡುತ್ತಿದ್ದರು. ಸ್ಮಶಾನಗಳಲ್ಲಿ ಮೃತದೇಹಗಳನ್ನು ಸುಡಲು ಸ್ಥಳ ದೊರೆಯದೆ ಸಾಲುಗಟ್ಟಿ ನಿಲ್ಲುವ ಸ್ಥಿತಿ ರಾಜ್ಯದ ಇತರೆ ಜಿಲ್ಲೆಗಳಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ಸ್ಥಿತಿಯು ಸಹ ಆಗಿತ್ತು.
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ಜಿಲ್ಲೆಯ ಹಿರಿಯ ರಾಜಕಾರಣಿ,ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ, ಹೊಸಕೋಟೆ ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪಕ್ಷೇತರವಾಗಿ ಸ್ಪರ್ಧಿಸಿ ಶಾಸಕರಾಗಿದ್ದ 105 ವರ್ಷದ ಮಾಜಿ ಶಾಸಕ ಸು.ರಂ.ರಾಮಯ್ಯ ಅವರ ನಿಧನ 2021 ರಲ್ಲಿ ಅಗಲಿದ ಪ್ರಮುಖ ಗಣ್ಯರಾಗಿದ್ದಾರೆ.
ರಾಜಕೀಯವಾಗಿ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ಕ್ಷೇತ್ರದ ಶಾಸಕ ಶರತ್ಬಚ್ಚೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರ ನಡುವಿನ ಶಿಷ್ಟಾಚಾರ ಉಲ್ಲಂಘಟನೆ ಜಗಳ 2021ರಲ್ಲೂ ಮುಂದುವರೆದಿದ್ದು,ಇಲ್ಲಿನ ಅಧಿಕಾರಿಗಳು ಹಾಗೂ ಇಬ್ಬರೂ ನಾಯಕರ ಹಿಂಬಾಲಕರು ಕಷ್ಟಕ್ಕೆ ಸಿಲುಕುವುದು ಮಾತ್ರ ತಪ್ಪಿಲ್ಲ.
ಎರಡು ವರ್ಷಗಳಿಂದಲು ನೆನೆಗುದಿಗೆ ಬಿದ್ದಿದ್ದ ದೊಡ್ಡಬಳ್ಳಾಪುರ ನಗರಸಭೆಗೆ ಚುನಾವಣೆ ನಡೆದು ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದಿವೆ. ಅಧ್ಯಕ್ಷರ ಆಯ್ಕೆಯಾಗದೇ ಖಾಲಿ ಉಳಿದಿದ್ದ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪುರಸಭೆಗೆ ಅಧ್ಯಕ್ಷರ ಆಯ್ಕೆ ನಡೆದಿದೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಮೇಲ್ದರ್ಜೆಗೆ ಏರಿಸಿದ್ದು ಅದು ಈಗ ಪಟ್ಟಣ ಪಂಚಾಯಿತಿ ಆಗಿದೆ. ಆದರೆ ಇನ್ನು ಚುನಾವಣೆ ನಡೆಯದೇ ಸ್ಥಳೀಯ ಆಡಳಿತ ಅಧಿಕಾರಿಗಳ ಕೈಯಲ್ಲೇ ಉಳಿದಿದೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ಜಿಲ್ಲೆಯಲ್ಲಿ ಸೂಕ್ತ ಹಾಸಿಗೆ ಸೌಲಭ್ಯ, ಆಮ್ಲಜನಕ ಉತ್ಪಾದಕ ಘಟಕಗಳು ಇಲ್ಲದೆ ರೋಗಿಗಳು ಪರದಾಡಿದ್ದನ್ನು ಮನಗಂಡ ಸರ್ಕಾರ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲೂ ಆಮ್ಲಜನಕ ಘಟಕಗಳನ್ನು ಸ್ಥಾಪನೆ ಮಾಡಿದ್ದು ಇವುಗಳು ಕಾರ್ಯಾರಂಭವಾಗಿವೆ. ಜಿಲ್ಲೆಯಲ್ಲಿ ಯಾವುದೇ ವೈಧ್ಯಕೀಯ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಯಾವುದೂ ಸಹ ಇಲ್ಲ. ಇದರಿಂದಾಗಿ ಕೇಂದ್ರ ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಖಾಸಗಿ ಕಂಪನಿಗಳ ಸಹ ಭಾಗಿತ್ವದಲ್ಲಿ 70 ಹಾಸಿಗೆಗಳ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಮೇಕ್ಶಿಫ್ಟ್ ಆಸ್ಪತ್ರೆಯನ್ನು ದೊಡ್ಡಬಳ್ಳಾಪುರದಲ್ಲಿ ನಿರ್ಮಿಸಿದೆ. ಇದು ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ದೊರೆಯಲು ಸಹಕಾರಿಯಾಗಿದೆ. ಆದರೆ ರೂ9 ಕೋಟಿ ವೆಚ್ಚದಲ್ಲಿ ಇಲ್ಲಿನ ತಾಯಿ ಮುಗು ಆಸ್ಪತ್ರೆಯನ್ನು ಉನ್ನತೀಕರಿಸುವ ಸಚಿವ ಸಂಪುಟದ ನಿರ್ಧಾರ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿಗಳಿಂದ ಮೊದಲುಗೊಂಡು ಎಲ್ಲಾ ಇಲಾಖೆಗಳ ಸಚಿವರ ಮುಂದೆಯು ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಹಣ ಮಾತ್ರ ಮಂಜೂರಾಗಿಲ್ಲ.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೆರೆಗಳಿಗೆ ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ದೀಕರಿಸಿ ಹರಿಸುವ ಕೆ.ಸಿ.ವ್ಯಾಲಿ ಯೋಜನೆ 2021ರಲ್ಲಿ ಹೊಸಕೋಟೆ ತಾಲ್ಲೂಕಿನಲ್ಲಿ ಮಾತ್ರ ಸಕಾರವಾಗಿದ್ದು, ಕೆಲವು ಕೆರೆಗಳಿಗೆ ಪೈಪ್ಲೈನ್ ಮೂಲಕ ನೀರು ಹರಿದಿವೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಕೆರೆಗಳಿಗು ಶುದ್ದೀಕರಿಸಿದ ನೀರನ್ನು ಹರಿಸಬೇಕು ಎನ್ನುವ ಜನರ ಬೇಡಿಕೆ ಇನ್ನು ಮನವಿ ಮಟ್ಟದಲ್ಲೇ ಉಳಿದಿದೆ ವಿನ ಕಾರ್ಯಗತವಾಗಿಲ್ಲ.
ಜಿಲ್ಲೆಯಲ್ಲೇ ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದ ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸದಲ್ಲಿ ಲಕ್ಷಾಂತರ ಜನ ಭಕ್ತಾದಿಗಳು ಭಾಗವಹಿಸುತ್ತಿದ್ದರು. ಆದರೆ ಕೋವಿಡ್-19 ಕಾರಣದಿಂದಾಗಿ ಎರಡು ವರ್ಷಗಳಿಂದಲು ರಥೋತ್ಸವ ಕೇವಲ ದೇವಾಲಯದ ಆವರಣಕ್ಕೆ ಮಾತ್ರ ಸೀಮಿತವಾಗಿದೆ. ಇದೇ ಪರಿಸ್ಥಿತಿ ದೇವನಹಳ್ಳಿ ನಗರದ ಕೋಟೆಯಲ್ಲಿ ವೆಂಕಟರಮಣಸ್ವಾಮಿ ರಥೋತ್ಸವದ್ದು ಸಹ.
ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಅವರು ನೀಲಗಿರಿ ಮರಗಳ ತೆರವು ಆಂದೋಲ ಪ್ರಾರಂಭಿಸಿ ನೀಲಗಿರಿ ಮರಗಳನ್ನು ತೆರವುಗೊಳಿಸುವಂತೆ ರೈತರ ಮನವೊಲಿಸಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ರಾಗಿ ಸೇರಿದಂತೆ ಇತರೆ ಬೆಳೆ ಬೆಳೆಯುವ ಪ್ರದೇಶ ವಿಸ್ತರಣೆಯಾಗಿದೆ. ಆದರೆ ಅಂತರ್ಜಲ ಕುಸಿತದಿಂದಾಗಿ ಕೊಳವೆಬಾವಿಗಳಲ್ಲಿ ನೀರು ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಜಿಲ್ಲೆಯಲ್ಲಿ ಸಾರ್ವಜನಿಕರ ಹಾಗೂ ಖಾಸಗಿ ಕಂಪನಿಗಳ ಸಹಕಾರದೊಂದಿಗೆ 28 ಕೆರೆಗಳಲ್ಲಿ ಹೂಳು ತೆಗೆಸಿ ಅಭಿವೃದ್ಧಿಗೊಳಿಸಲಾಗಿತ್ತು. ನವೆಂಬರ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಜಿಲ್ಲೆಯ ತಾಲ್ಲೂಕಿನಲ್ಲೂ ಬಹುತೇಕ ಕೆರೆಗಳಿಗೆ ನೀರು ಬಂದಿವೆ. ಶೇ 40 ರಷ್ಟು ಕೆರೆಗಳು ಕೋಡಿ ಬಿದ್ದಿವೆ. ಇದರಿಂದಾಗಿ ಜಿಲ್ಲೆಯ ಜನರ ಕುಡಿಯುವ ನೀರಿನ ಬವಣೆ ಹಾಗೂ ಕೃಷಿಗೂ ನೀರಿನ ಕೊರತೆ ನೀಗಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಸುರಿದ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿದ್ದ ರೈತರು ಕೊಳವೆ ಬಾವಿಗಳಿಂದ ನೀರು ಮೇಲೆತ್ತಿ ಬೇಸಿಗೆಯಲ್ಲಾದರು ಒಂದಿಷ್ಟು ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.
2014ರಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿ ಆರಂಭವಾದ ಎಂಎಸ್ಜಿಪಿ ಕಸ ವಿಲೇವಾರಿ ಘಟಕದಿಂದ ಸುತ್ತಲಿನ ಗ್ರಾಮಗಳ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ಹಾಕುವುದನ್ನು ನಿಲ್ಲಿಸುವಂತೆ 2018ರಿಂದಲು ಸಾಕಷ್ಟು ಬಾರಿ ಹೋರಾಟ, ವಾರಗಟ್ಟಲೆ ಧರಣಿಗಳು ಪಕ್ಷಾತೀತವಾಗಿ ನಡೆದಿವೆ. ಆದರೆ ಪ್ರತಿ ಬಾರಿ ಹೋರಾಟಗಳು ನಡೆದಾಗಲು ಒಂದಲ್ಲಾ ಒಂದು ಭರವಸೆಗಳನ್ನು ನೀಡುವ ಸರ್ಕಾರ ಕಸ ತಂದು ಇಲ್ಲಿಗೆ ಹಾಕಬಾರದು ಎನ್ನುವ ಸ್ಥಳೀಯಯ ಬೇಡಿಕೆ ಮಾತ್ರ ಹಾಗೆಯೇ ಉಳಿದಿದೆ. ಡಿಸಬಂರ್ ತಿಂಗಳ ಮೊದಲ ವಾರದಲ್ಲಿ 13 ದಿನಗಳ ಕಾಲ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮಗಳ ಜನರು ಧರಣಿ ನಡೆಸಿದ್ದರು. ಧರಣಿ ಸ್ಥಳಕ್ಕೆ ಸಾಕಷ್ಟು ಜನ ರಾಜಕಾರಣಿಗಳು, ಸಂಘಟನೆಗಳ ಮುಖಂಡರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಸಂಘಟನೆಯ ಕೊರತೆ ಹಾಗೂ ಸ್ವಪ್ರತಿಷ್ಠೆಗಳಿಂದಾಗಿ ಕಸದ ಸಮಸ್ಯೆ ಅಂತ್ಯ ಆಗುವುದಕ್ಕೆ ಬದಲಾಗಿ ಮತ್ತಷ್ಟ ಹೆಚ್ಚಾಗುತ್ತಲೇ ಇದೆ. ಹೋರಾಟಗಳು ಹೆಚ್ಚಾಗಿದ್ದರಿಂದ ಬಿಬಿಎಂಪಿ ವ್ಯಾಪ್ತಿಯಿಂದ ಹೆಚ್ಚಿನ ಕಸ ತುಂಬಿಕೊಂಡು ಬರುವ ಲಾರಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಯದೆಯೇ ವಿನಹ ಕಸದ ಸಮಸ್ಯೆ ಮಾತ್ರ ಪರಿಹಾರವಾಗದೇ 2022ಕ್ಕೂ ಮುಂದುವರೆದಿದೆ.
ವರ್ಷದ ಅಂತ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ರವಿ ಅವರು ಎರಡನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದರು. ಆದರೆ ಕ್ಷೇತ್ರದ ವ್ಯಾಪ್ತಿಯಲಿನ 8 ತಾಲ್ಲೂಕುಗಳಿಂದ ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣಸ್ವಾಮಿ ಅವರು ಕೇವಲ 54 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಹೀನಾಯ ಸೋಲುಕಂಡಿದ್ದು ಬಿಜೆಪಿ ನಾಯಕರು ತೀವ್ರ ಮುಜುಗುರ ಪಡುವಂತಾಯಿತು.
ಈ ವರ್ಷದ ಕೊನೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲೂ ಸಹ ಅಚ್ಚರಿಯ ಫಲಿತಾಂಶ ಬರುವ ಮೂಲಕ ಸಾಹಿತ್ಯ ಪರಿಷತ್ನಲ್ಲಿ ಓಟ್ ಬ್ಯಾಂಕ್ ಹಿಡಿತ ಹೊಂದಿದ್ದ ಚಿ.ಮಾ.ಸುಧಾಕರ್ ಅವರನ್ನು ಸೋಲಿಸುವ ಮೂಲಕ ಅಷ್ಟೇನು ಪರಿಚಿತವಲ್ಲದ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿ ಅನುಭವ ಹೊಂದಿದ್ದ ಬಿ.ಎನ್.ಕೃಷ್ಣಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಾಹಿತ್ಯ ಪರಿಷತ್ ಯಾರೊಬ್ಬ ವ್ಯಕ್ತಿಯ ಹಾಗೂ ಒಂದು ವೃತ್ತಕ್ಕೆ ಮಾತ್ರ ಸೀಮಿತ ಅಲ್ಲ ಎನ್ನುವುದನ್ನು ಜಿಲ್ಲೆಯ ಮತದಾರರು ಸಾಬೀತು ಮಾಡಿದ್ದು 2021ರ ವಿಶೇಷಗಳಲ್ಲಿ ಒಂದಾಗಿದೆ. (ಸಂಗ್ರಹ ಚಿತ್ರಗಳನ್ನ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….