ದೊಡ್ಡಬಳ್ಳಾಪುರ, (ಜುಲೈ.01); ಆರೋಗ್ಯವೇ ಮಹಾಭಾಗ್ಯ ಎನ್ನುವುದು ಸಾರ್ವಕಾಲಿಕ ಸತ್ಯ. ಅಂತಹ ಆರೋಗ್ಯವನ್ನು ರಕ್ಷಿಸಿ, ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವನಿಗೆ ಪುನರ್ಜನ್ಮ ನೀಡುವುದು ವೈದ್ಯರ ಕಾಯಕವಾಗಿದ್ದು, ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್ ಹೇಳಿದರು.
ನಗರದ ಶ್ರೀ ರಾಮ ಆಸ್ಪತ್ರೆಯಲ್ಲಿ ಎಚ್.ಇ.ಎಚ್.ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ವೈದ್ಯಕೀಯ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗುತ್ತದೆ. ವೈದ್ಯೋ ನಾರಾಯಾಣ ಹರಿ ಎನ್ನುವುದು ಅದಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿ ವೈದ್ಯರನ್ನ ದೇವರಿಗೆ ಹೊಲಿಸಲಾಗುತ್ತದೆ. ಈ ಪದ್ಧತಿಯೂ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಭಾರತರತ್ನ ಡಾ. ಭಿದನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ 1ರಂದು ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಡಾ.ಬಿ.ಸಿ.ರಾಯ್ ವೈದ್ಯರಷ್ಟೇ ಅಲ್ಲದೇ, ರಾಜಕಾರಣಿ, ಶಿಕ್ಷಣ ತಜ್ಞ ಹಾಗೂ ಸಮಾಜ ಸೇವಕರಾಗಿದ್ದರು. ವೈದ್ಯರ ಪ್ರಾಮುಖ್ಯತೆ ಹಾಗು ಚಿಕಿತ್ಸೆಗಳ ಮಹತ್ವಗಳನ್ನು ಅರಿಯುವಲ್ಲಿ ಈ ದಿನಾಚರಣೆ ಮಹತ್ವದ್ದಾಗಿದೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಜನ ಸೇವೆಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಶ್ರಮವನ್ನು ಹಾಗೂ ವೈದ್ಯಕೀಯ ಕ್ಷೇತ್ರದ ಮಹತ್ವವನ್ನು ಅರಿತು ವೈದ್ಯರನ್ನು ನಾವು ಸದಾ ಗೌರವಿಸಬೇಕಿದೆ .
ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳ ತ್ಯಾಗ ಕೊಡುಗೆ ಅಪಾರವಾಗಿದೆ. ಇತರೆ ಎಲ್ಲಾ ವೃತ್ತಿಗಳಿಗಿಂತ ವೈದ್ಯ ವೃತ್ತಿ ಅತ್ಯಂತ ಸವಾಲಿನ ಕೆಲಸವಾಗಿದೆ. ವೈದ್ಯಕೀಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅಪಾರ ಹೆಸರು ಮಾಡಿದ್ದ ದೊಡ್ಡಬಳ್ಳಾಪುರ ತಾಲೂಕಿನ ಹೆಸರಾಂತ ವೈದ್ಯರಲ್ಲಿ ಒಬ್ಬರಾಗಿರುವ ಡಾ.ಎಚ್.ಜಿ.ವಿಜಯಕುಮಾರ್ ಅವರು, ವೈದ್ಯಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೇ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದರೆ. ಇವರ ಒಡನಾಡಿಯಾಗಿ ಅವರ ಪತ್ನಿ ಡಾ.ಮಾಲಾ ವಿಜಯಕುಮಾರ್ ಅವರ ಸೇವೆ ಸಹ ಸ್ಮರಣೀಯವಾಗಿದ್ದು, ವೈದ್ಯರಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸುಜ್ಞಾನ ದೀಪಿಕಾ ಸಂಚಾಲಕ ಎಂ.ಎಸ್.ಮಂಜುನಾಥ್, ಶ್ರೀ ರಾಮ ಆಸ್ಪತ್ರೆಯ ಮೌಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಮೊದಲಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….