ಪ್ರಾಚೀನ ಕಾಲದಲ್ಲಿ, ಭಾರತದ ಮಧ್ಯ ಪ್ರದೇಶವನ್ನು ಒಬ್ಬ ಬಲಿಷ್ಠ ರಾಜ ಆಳುತ್ತಿದ್ದನು. ದಕ್ಷನು, ಪ್ರಾಮಾಣಿಕನು, ಪ್ರಜಾ ಪರಿಪಾಲಕನು ಆಗಿದ್ದ ಶ್ರೇಷ್ಠ ರಾಜನಾಗಿದ್ದನು.
“ಹಲ್ಲು ಇದ್ದವರಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದವರಿಗೆ ಹಲ್ಲಿಲ್ಲ ಎಂಬಂತೆ” ಎಷ್ಟೆಲ್ಲಾ ಸಿರಿ ಸಂಪತ್ತಿದ್ದರೂ ಸಂತಾನ ಭಾಗ್ಯವಿರಲಿಲ್ಲ. ರಾಜನಿಗೆ ಆಗಲೇ ವಯಸ್ಸಾಗುತ್ತಾ ಬಂದಿದೆ. ಹೀಗೆ ಚಿಂತೆಯಲ್ಲಿದ್ದಾಗ, ಭಗವಂತನ ಕೃಪೆಯೋ, ಅವನ ಒಳ್ಳೆಯ ಗುಣಕ್ಕೆ ದೇವರೇ ಕರೆದು ವರ ಕೊಟ್ಟಂತೆ ಅವನಿಗೆ ಒಬ್ಬ ಮಗ ಹುಟ್ಟಿದ.
ರಾಜನಿಗೆ ಬಹಳ ಸಂತೋಷವಾಯಿತು. ಆದರೆ ಅವನಿಗೆ ಮಗನ ಜೊತೆ ಹೆಚ್ಚು ಸಮಯ ಕಳೆಯುವ ಅವಕಾಶ ಇರಲಿಲ್ಲಾ. ವಯಸ್ಸಾದ ಕಾಲದಲ್ಲಿ ಹಾಸಿಗೆ ಹಿಡಿದ ಕೊನೆ ಸಮಯದಲ್ಲಿ, ತನ್ನ ತಮ್ಮ ‘ಗುಣ’ ನನ್ನು ಕರೆದು, ನನ್ನ ಮಗನನ್ನು ನಿನಗೆ ಒಪ್ಪಿಸಿದ್ದೇನೆ, ಅವನು ವಯಸ್ಸಿಗೆ ಬರುವ ತನಕ ರಾಜ್ಯಭಾರವನ್ನು ನಡೆಸಿ ನಂತರ ಅವನಿಗೆ ಪಟ್ಟ ಕಟ್ಟು ಎಂದು ಹೇಳಿ ಕಣ್ಮುಚ್ಚಿದನು.
ಅಣ್ಣ ತಮ್ಮ ಬಹಳ ಚೆನ್ನಾಗಿದ್ದರು, ಅಣ್ಣ ಹೋಗಿದ್ದು ತಮ್ಮ ಗುಣನಿಗೆ ದುಃಖವಾಯಿತು. ಅಣ್ಣನ ಮಾತಿನಂತೆ ಅವನ ಮಗನನ್ನು ಬಹಳ ಪ್ರೀತಿ ಯಿಂದ ತನ್ನ ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡು ಬೆಳೆಸುತ್ತಿದ್ದನು.
ಆಡಳಿತದಲ್ಲಿ ಅವ್ಯವಸ್ಥೆ ಆಗದಂತೆ ಚೆನ್ನಾಗಿ ರಾಜ್ಯಭಾರ ನಡೆಸುತ್ತಿದ್ದನು. ರಾಜ್ಯದ ಪ್ರಜೆಗಳಿಗೆಲ್ಲ ಒಳ್ಳೆಯದಾಗಲಿ, ಮಳೆ ಬೆಳೆ ಚೆನ್ನಾಗಿ ಬಂದು ಸುಭಿಕ್ಷವಾಗಲಿ, ಎಂಬ ಸದುದ್ದೇಶದಿಂದ, ರಾಜ್ಯದ ಪಂಡಿತರು, ಜ್ಯೋತಿಷ್ಯರು ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಯಾಗ -ಯಜ್ಞ, ಹೋಮ- ಹವನ, ದಂತ ಪೂಜಾ ಕಾರ್ಯವನ್ನು ಹಮ್ಮಿ ಕೊಂಡನು.
ರಾಜ್ಯದ ಮೂಲೆ ಮೂಲೆಯ ಜನರಿಗೂ ಕರೆ ಕಳುಹಿಸಿದನು. ಆ ದಿನ ಬಂದಿತು ಎಲ್ಲೆಲ್ಲಿಂದಲೋ ವಿದ್ವಾಂಸರು, ಪಂಡಿತರು, ಕವಿಗಳು, ಕಲಾವಿದರು ಎಲ್ಲ ಬಂದು ಸೇರಿದರು. ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯುತ್ತಿತ್ತು.
ಅಲ್ಲಿಗೆ ಬಂದಿದ್ದ ವಿದ್ವಾಂಸರೊಬ್ಬರು ಹತ್ತಿರದಲ್ಲಿ ಆಟವಾಡುತ್ತಿದ್ದ ಮಕ್ಕಳಲ್ಲಿ ಒಬ್ಬ ಹುಡುಗನನ್ನು ರಾಜನಿಗೆ ತೋರಿಸಿ, ಈ ಹುಡುಗ ಯಾರು ಎಂದು ಕೇಳಿದಾಗ, ರಾಜ ತನ್ನ ಅಣ್ಣನ ಮಗ ಎಂದು ಹೇಳದೆ, ಇದೇ ಊರಿನ ಹುಡುಗನಿರಬೇಕು ಎಂದನು.
ವಿದ್ವಾಂಸನು ರಾಜನಿಗೆ ಹೇಳಿದ, ಈ ಹುಡುಗನ ಮುಖ ಲಕ್ಷಣ ಬಹಳ ಚೆನ್ನಾಗಿದೆ. ದೈವಾಂಶ ಸಂಭೂತನಂಥ ವರ್ಚಸ್ಸು ಇದೆ ಮುಂದೆ ದೊಡ್ಡರಾಜನಾಗುತ್ತಾನೆ, ಅದ್ವಿತೀಯನೆನೆಸುವಂತೆ ಆಡಳಿತ ನಡೆಸುತ್ತಾನೆ. ಬರೋಬ್ಬರಿ ಅರ್ದ ಶತಮಾನಕ್ಕೂ ಹೆಚ್ಚು ಕಾಲ ಇವನೇ ರಾಜ್ಯ ಭಾರ ನಡೆಸುತ್ತಾನೆ. ಹಾಗೆ, ಧರ್ಮಾತ್ಮನಾಗಿದ್ದ ವಿಕ್ರಮಾದಿತ್ಯನ ಸಿಂಹಾಸನ ವನ್ನೇರುವಂತಹ ಯೋಗ್ಯ ರಾಜನಾಗುತ್ತಾನೆ ಎಂದು ಭವಿಷ್ಯ ನುಡಿದನು.
ಇದನ್ನು ಕೇಳಿದ ರಾಜನಿಗೆ ಒಂದು ತರಹ ಹೊಟ್ಟೆಯಲ್ಲಿ ತಳಮಳವಾಗಿ ಅದು ಮತ್ಸರವಾಯಿತು. ಆ ದಿನದ ಕಾರ್ಯಕ್ರಮವೆಲ್ಲ ಮುಗಿದು, ವಿದ್ವಾಂಸರಿಗೆ, ಪಂಡಿತೋತ್ತಮರಿಗೆ, ಗಣ್ಯ ಅತಿಥಿಗಳಿಗೆ, ಉಡುಗೊರೆ, ದಾನ -ದಕ್ಷಿಣೆ ಗಳನ್ನು ಪುಷ್ಕಳವಾಗಿ ಕೊಟ್ಟು ಎಲ್ಲರನ್ನೂ ಸಂತೋಷದಿಂದ ಬೀಳ್ಕೊಟ್ಟನು.
ರಾಜನಿಗೆ ಈಗಾಗಲೇ ಅಧಿಕಾರದ ರುಚಿ ಅಪ್ಯಾಯವೆನಿಸಿತ್ತು. ಇಷ್ಟು ಕಷ್ಟ ಪಟ್ಟು ಉಳಿಸಿ ಬೆಳೆಸುವ ಸಾಮ್ರಾಜ್ಯವನ್ನು ಅಣ್ಣನ ಮಗನಿಗೆ ನಾನ್ಯಾಕೆ ಕೊಡಬೇಕು. ನನಗೇ ಮಗನಿದ್ದಾನಲ್ಲ. ನಾನು ಅಧಿಕಾರ ಸುಖವನ್ನು ಸಾಕಷ್ಟು ಅನುಭವಿಸಿ, ನಂತರ ಮಗನಿಗೆ ವರ್ಗಾಯಿಸಬೇಕು. ಅಧಿಕಾರಕ್ಕಾಗಿ ಹುಟ್ಟಿರುವ ಇವನನ್ನು ಬಾಲಕನಿರುವಾಗಲೇ ಕೊಲ್ಲಿಸಿ ಬಿಡಬೇಕು ಎಂದು ನಿಶ್ಚಯಿಸಿ, ಕಟುಕರನ್ನು ಕರೆದು, ಈ ಹುಡುಗನನ್ನು ಕಾಡಿಗೆ ಕರೆದುಕೊಂಡು ಹೋಗಿ ಕೊಂದು ಬಿಸಾಕಿ ಬನ್ನಿ ಎಂದನು.
ಈ ವಿಷಯ ಮಂತ್ರಿಗೆ ಹೇಗೂ ತಿಳಿಯಿತು. ಮಂತ್ರಿ ಬುದ್ಧಿವಂತ, ಸಮಯ ಪ್ರಜ್ಞೆ ಇರುವವನು. ಆ ಹೊತ್ತಿಗೆ ಕಾದಿದ್ದು ಆ ಕಟುಕರ ಜೊತೆ ಅವನು ಹೋದನು. ಮಂತ್ರಿಯ ಕರುಳು ಚುರಕ್ ಅಂದಿತು. ಮುದ್ದಾದ ಮಗು ಇವನ ತಂದೆ ಕರುಣಾಮೂರ್ತಿ, ದಯಾಳು, ಈಗಿರುವ ರಾಜನ ತಮ್ಮನೂ ಒಳ್ಳೆಯವನೇ, ಸಮಯ ಸರಿಯಿಲ್ಲ ನಾನೇ ಸರಿ ಮಾಡಬೇಕು, ಎಂದು ಯೋಚಿಸಿ ಆ ಹುಡುಗನ ಬಳಿ ಬಂದು, ಮಗು ನಿನ್ನ ಚಿಕ್ಕಪ್ಪ ನಿನ್ನನ್ನು ಕೊಂದು ಬರುವಂತೆ ಕಟುಕರಿಗೆ ಹೇಳಿ ಕಳಿಸಿದ್ದಾನೆ ಏನು ಮಾಡುವುದು ಎಂದು ಕೇಳಿದ. ಹುಡುಗ ಹೇಳಿದ ಹಾಗಾದರೆ ನನ್ನನ್ನು ಕೊಂದುಬಿಡಿ ಎಂದನು. ಮತ್ತೆ ಮಂತ್ರಿ ಕೇಳಿದ, ನಿನ್ನನ್ನು ಕೊಂದಿದ್ದೇವೆ ಎಂದು ರಾಜನಿಗೆ ತೋರಿಸಲು ಸಾಕ್ಷಿಯಾಗಿ ಒಂದು ಗುರುತು ಬೇಕು ಏನು ಮಾಡಲಿ ಎಂದನು.
ನಾನೊಂದು ಪತ್ರ ಬರೆದು ಕೊಡುತ್ತೇನೆ ಅದನ್ನು ರಾಜನಿಗೆ ಕೊಟ್ಟುಬಿಡಿ ಎಂದು ತಾಳೆಗರಿಯ ಮೇಲೆ, ಉದ್ದನೆ ಮುಳ್ಳಿನಿಂದ ಕೈಯನ್ನು ಗೀಚಿ ರಕ್ತದಿಂದ ಬರೆದು ಮಡಿಚಿ ಮಂತ್ರಿಯ ಕೈಗೆ ಕೊಟ್ಟನು. ಮಂತ್ರಿ ಅದನ್ನು ತೆಗೆದಿಟ್ಟುಕೊಂಡು ಆ ಹುಡುಗನನ್ನು ಕೊಲ್ಲದಂತೆ ಕಟುಕರನ್ನು ತಡೆದು ಮೊದಲೇ ಯೋಜನೆ ಮಾಡಿಟ್ಟಿದ್ದ ಮನೆಯಲ್ಲಿ ಹುಡುಗನನ್ನು ಇರಿಸಿ ನೋಡಿಕೊಳ್ಳುವ ವ್ಯವಸ್ಥೆ ಮಾಡಿ ಹಿಂತಿರುಗಿದನು.
ಕಟಕರು ಗುಪ್ತವಾಗಿ ರಾಜನಲ್ಲಿ ಬಂದರು. ಎಲ್ಲಾ ಕೆಲಸ ಮುಗಿಸಿ ಬಂದಿರಾ ಎಂದು ಕೇಳಿದನು. ಹೌದು ಪ್ರಭು, ಆದರೆ ಆ ಬಾಲಕನು ಲಕೊಟೆ ಬರೆದು ನಿಮಗೆ ಕೊಡಲು ಹೇಳಿದ್ದಾನೆ ಎಂದು ಕೊಟ್ಟರು. ರಾಜ ತೆಗೆದು ಓದಿದನು. ಅದರ ಒಕ್ಕಣೆ ಹೀಗಿತ್ತು. ” ಎಂತೆಂಥ ರಾಜಾದಿ ರಾಜರುಗಳೇ ಅಳಿಸಿ ಹೋಗಿದ್ದಾರೆ. ರಾವಣ ಕುಂಭಕರ್ಣರನ್ನು ಸಂಹರಿಸಿದ ರಾಮ ಹೋಗಿದ್ದಾನೆ. ಸಹಸ್ರಾರು ವರ್ಷಗಳೇ ಕಳೆದರು, ಜನಗಳಿಗೆ ಆದರ್ಶ ಪ್ರಾಯನಾಗಿದ್ದು, ದ್ವಾರಕಾ ಸಾಮ್ರಾಜ್ಯವನ್ನು ಕಟ್ಟಿ ಮಹಾ ಸಾಮ್ರಾಜ್ಯದಂತೆ ಬೆಳೆಸಿದ ಚತುರನಾದ ಶ್ರೀ ಕೃಷ್ಣನೆ ತನ್ನ ಸಾಮ್ರಾಜ್ಯವನ್ನು, ಕುಲವನ್ನು ಅಳಿಸಿ ಹೊರಟು ಹೋದನು.
ಕೌರವರನ್ನು ನಾಶ ಮಾಡಿದ ಧರ್ಮಾತ್ಮರಾದ ಪಾಂಡವರೇ ಹೊರಟು ಹೋದರು. ಹೀಗಿರುವಾಗ ಚಿಕ್ಕಪ್ಪ ನಿನ್ನ ಜೊತೆ ಈ ಭೂಮಿ ಬರುತ್ತದೆಯೇ ? “ಎಂದು ಬರೆದಿರುವುದನ್ನು ಓದಿದ ರಾಜನಿಗೆ, ತಾನು ಮಾಡಿದ ತಪ್ಪಿನ ಅರಿವಾಗಿ, ಅಯ್ಯೋ ನಾನೆಂಥ ನೀಚ, ಎಂಥ ಪ್ರತಿಭಾವಂತ ಮಗನನ್ನೇ ಕೊಲ್ಲಿಸಿಬಿಟ್ಟೆನಲ್ಲ ಎಂದು ಪಶ್ಚಾತಾಪ ದಿಂದ ಅಳತೊಡಗಿದನು.
ಅಲ್ಲಿದ್ದವರು ಏನಾಯಿತು ಎಂದು ಕೇಳಿದರು , ರಾಜನು ದುಃಖದಿಂದ ತಾನೇ ಮಾಡಿಸಿದ ದುಷ್ಕೃತ್ಯವನ್ನು ಒಪ್ಪಿಕೊಂಡನು. ಏನು ಮಾಡಲಿ? ಅದಕ್ಕೆ ಏನಾದರೂ ಉಪಾಯವಿದ್ದರೆ ತಿಳಿಸಿ ಹೋಗಿ ಪಂಡಿತರನ್ನು, ವಿದ್ವಾಂಸರನ್ನು ಕರೆಸಿ ಸಭೆ ಸೇರಿಸಿ ಎಂದನು. ಸಭೆ ಕರೆದರು ತಾನು ಮಾಡಿದ ಕೃತ್ಯವನ್ನು ಹೇಳಿ, ನನ್ನ ಮಗನನ್ನೇ ಕೊಂದ ಈ ತಪ್ಪಿಗೆ ನಾನು ಯಾವ ಶಿಕ್ಷೆಯನ್ನು ಅನುಭವಿಸಲಿ, ನೀರಿನಲ್ಲಿ ಮುಳುಗಲೆ, ಆಹಾರ ನೀರು ತೊರೆದು ಉಪವಾಸ ಮಾಡಲೆ, ಅಥವಾ ಅಗ್ನಿಯಲ್ಲಿ ಧುಮುಕಲೆ, ಯಾವುದರಲ್ಲಿ ನಾನು ಸಾಯಲಿ ದಯವಿಟ್ಟು ಈ ದಿನದೊಳಗೆ ನನಗೆ ತಿಳಿಸಲೇಬೇಕು ಎಂದು ಹೇಳಿದನು. ಇಡೀ ದಿನ ಮತ್ತೆ ಮತ್ತೆ ಮಗನನ್ನು ನೆನೆಸಿಕೊಂಡು ಪತ್ರವನ್ನು ಮತ್ತೆ ಮತ್ತೆ ಓದಿ ದುಃಖಿಸುತ್ತಾ, ಸಂಕಟದಿಂದ ಒದ್ದಾಡುತ್ತಿದ್ದನು.
ಎಲ್ಲಾ ತಿಳಿದ ಮೇಲೆ ಮಂತ್ರಿ ಪ್ರವೇಶ ಮಾಡಿದನು. ಪ್ರಭು ನನಗೆ ಕೆಲವು ಜನ ಮಾಂತ್ರಿಕರು ಗೊತ್ತಿದ್ದಾರೆ. ಅವರು ಸತ್ತವರ ಶರೀರವಿದ್ದರೆ ಸಾಕು ಅದಕ್ಕೆ ಮಂತ್ರವನ್ನು ಉಪದೇಶಿಸಿ ಜೀವತರಿಸುತ್ತಾರೆ. ಅವರನ್ನು ಕರೆಸಲೆ ಎಂದು ಕೇಳಿದನು. ಆಶಾವಾದಿಯಂತೆ ದುಃಖದಿಂದ ಎಚ್ಚೆತ್ತು ಮೊದಲು ಕರೆಸಿ ಎಂದು ಹೇಳಿದನು.
ಮಂತ್ರಿ ಮೊದಲೇ ಏರ್ಪಾಟು ಮಾಡಿಕೊಂಡಂತೆ, ಎರಡು ಮೂರು ಜನ, ಮಂತ್ರ ದಂಡ ಹಿಡಿದುಕೊಂಡ ಕಾಪಾಲಿಗಳಂತೆ ಕಾಣುವ ಮಾಂತ್ರಿಕ ವೇಷಧಾರಿಗಳನ್ನು ಆಸ್ಥಾನಕ್ಕೆ ಕರೆಸಿದನು. ಅವರು ಮಂತ್ರ ದಂಡವನ್ನು ಹಿಡಿದುಕೊಂಡು ಹೇಳಿ ನಮಗೆ ಹೇಳಿ ಯಾವುದೇ ವ್ಯಕ್ತಿ ಅದೆಂತದೇ ಕಾರಣದಿಂದಲಾದರೂ ಸತ್ತಿರಲಿ ಅವರ ದೇಹವನ್ನು ಕೊಟ್ಟರೆ, ಅವರಿಗೆ ಪುನಃ ನಾವು ಜೀವವನ್ನು ಕೊಡುತ್ತೇವೆ ಎಂದು ಹೇಳಿದರು. ತಕ್ಷಣ ರಾಜನು ಕಾಡಿನಲ್ಲಿ ತಲೆ ಕಡಿದ ಬಿಸಾಕಿದ ಮಗನನ್ನು ಬದುಕಿಸಲು ಮಂತ್ರವಾದಿಗಳ ಸಮೇತ ಬಂದನು.
ಮಂತ್ರಿಯ ಯೋಜನೆಯಂತೆ ಆ ಹುಡುಗನನ್ನು ಕಾಡಿನ ನಡುವೆ ತಂದು ನಿಲ್ಲಿಸಿದರು. ಮಂತ್ರವಾದಿಗಳು ಯಾರಿಗೂ ಕಾಣಬಾರದೆಂದು ದಟ್ಟವಾಗಿ ಆವರಿಸುವಂತೆ ಹೊಗೆಯಿಂದ ಸುತ್ತಲ ಜಾಗವನ್ನೆಲ್ಲಾ ಮರೆ ಮಾಡಿದರು. ಹೊಗೆಯ ಮಧ್ಯೆ ನೆರಳಿನಂತೆ ನಿಧಾನವಾಗಿ ಆ ಬಾಲಕ ನಡೆದು ಬಂದನು. ಆ ಹೊತ್ತಿಗೆ ಹೊಗೆಯೆಲ್ಲ ಮಾಯವಾಗಿ ಬಾಲಕ ಎದುರಿಗೆ ಕಂಡನು.
ರಾಜನಾದ ಚಿಕ್ಕಪ್ಪ ಬಾಲಕನನ್ನು ಸಂತೋಷದಿಂದ ಎತ್ತಿಕೊಂಡು ಅಪ್ಪಿ ಮುದ್ದಾಡಿದನು. ಕಾಪಾಲಕರಿಗೆ ಧನ್ಯವಾದ ಹೇಳಿ ನಿಮ್ಮಿಂದಾಗಿ ನನ್ನ ಮಗ ಬದುಕಿದ ಎಂದು ಸಂತೋಷದಿಂದ ಕೊಂಡಾಡಿದನು. ಎಲ್ಲರೆದುರು ಬಾಲಕನನ್ನು ಸಭೆಗೆ ಕರೆತಂದು, ಸಿಂಹಾಸನದ ಹತ್ತಿರ ನಿಲ್ಲಿಸಿ, ಈ ಸಿಂಹಾಸನಕ್ಕೆ ನೀನೇ ವಾರಸು ದಾರ, ಇನ್ನು ಮುಂದೆ ಸಿಂಹಾಸನ ನಿನ್ನದು. ಎಂದು ಹೇಳಿ ಸಿಂಹಾಸನದ ಮೇಲೆ ಕೂರಿಸಿದನು.
ಹುಡುಗನಿಗೆ ಪ್ರಾಪ್ತ ವಯಸ್ಸು ಬರುವ ತನಕ ತಾನು ಆಡಳಿತದಜ ಉಸ್ತುವಾರಿ ವಹಿಸಿಕೊಂಡನು. ಬಾಲಕನಿಗೆ ಎಲ್ಲಾ ಶಾಸ್ತ್ರ ಹಾಗೂ ಯುದ್ಧ ಶಸ್ತ್ರಾಸ್ತ್ರಗಳ ವಿದ್ಯೆಗಳನ್ನೆಲ್ಲ ಕಲಿಸಿ ಪಾರಂಗತ ನನ್ನಾಗಿ ಮಾಡುತ್ತಾನೆ. ಅವನಿಗೆ ಪಟ್ಟಾಭಿಷೇಕ ಮಾಡಿ ಚಿಕ್ಕಪ್ಪನು ವಾನಪ್ರಸ್ಥಕ್ಕೆ ಹೊರಟನು.
ಈ ರೀತಿ ರಾಜನಾಗುವ ಯೋಗವಿದ್ದು, ಎಲ್ಲಾ ಕಠಿಣ ಪರಿಸ್ಥಿತಿಗಳು ಅವನಿಗೆ ಪೂರಕವಾಗಿದ್ದು ಮುಂದೆ ರಾಜನಾದ ಆ ಬಾಲಕನೇ ಇತಿಹಾಸ ಪ್ರಸಿದ್ಧನಾದ “ಭೋಜರಾಜ.” ಅರ್ದ ಶತಮಾನಕ್ಕೂ ಹೆಚ್ಚು ಕಾಲ ಪ್ರಾಮಾಣಿಕವಾದ ರಾಜ್ಯಭಾರ ನಡೆಸಿ, ಸಮೃದ್ಧವಾಗಿಸಿ, ರಾಜ್ಯವನ್ನು ಉತ್ತುಂಗಕ್ಕೆ ಏರಿಸಿ ಪ್ರಜಾನುರಾಗಿಯಾಗಿ, ಚಿರಸ್ಥಾಯಿಯಾಗುವಂಥ ಹೆಸರು ಪಡೆದ ಇತಿಹಾಸ ಪ್ರಸಿದ್ಧನಾದ ರಾಜನೇ ‘ಬೋಧಿರಾಜ.’
ಬರಹ: ಆಶಾ ನಾಗಭೂಷಣ. (ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….