ಶಿವಮೊಗ್ಗ, (ಜುಲೈ.08); ಮದುವೆಯಾಗಿ 16 ವರ್ಷ ಆಗಿದ್ದು, ಮಕ್ಕಳಾಗಿಲ್ಲ. ಈ ಕಾರಣಕ್ಕೆ ಕೊರಗಿನಲ್ಲಿದ್ದ ಅಳಿಯ ಪ್ರತಾಪ್ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಬಿ.ಸಿ.ಪಾಟೀಲರ ಮೊದಲ ಪುತ್ರಿ ಸೌಮ್ಯ ಅವರ ಪತಿ ಕೆ.ಜಿ. ಪ್ರತಾಪ್ ಕುಮಾರ್ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಕೆರೆ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಬಳಿ ಪ್ರತಿಕ್ರಿಯೆ ನೀಡಿದರು.
ಪ್ರತಾಪ್ ವಿಷ ಸೇವಿಸಿರುವುದನ್ನು ನೋಡಿದವರು ಅವರನ್ನು ಹೊನ್ನಾಳಿ ಆಸ್ಪತ್ರೆಗೆ ದಾಖಲಿಸಿದ್ದು, ಈ ವಿಷಯವನ್ನು ಸೋದರ ಮಧ್ಯಾಹ್ನ ನನಗೆ ತಿಳಿಸಿದ್ದರು. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪ್ರತಾಪ್ ಕಾಣೆಯಾದ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದೆ. ನಂತರ ಹೊನ್ನಾಳಿಯಲ್ಲಿ ಜೋಳಕ್ಕೆ ವಿಷ ಬೆರಸಿ ಕುಡಿದಿರುವುದು ತಿಳಿಯಿತು. ಮಕ್ಕಳಿಲ್ಲವೆಂಬ ಕೊರಗಿನಲಿದ್ದ ಅವರನ್ನು ಎರಡು ತಿಂಗಳು ಡಿಅಡಿಕ್ಟ್ ಸೆಂಟರ್ನಲ್ಲೂ ಇರಿಸಲಾಗಿತ್ತು. ಸರಿ ಹೋಗಿದ್ದ ಅವರು ನಮ್ಮ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು.
ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ನಾಳೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….