ವಯನಾಡು, (ಆಗಸ್ಟ್.04); ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕೆ ಮತ್ತು ಚೂರಲ್ಲ ಗ್ರಾಮಗಳಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಆದ ಒಂದೊಂದೇ ಮನಕಲಕುವ ಸ್ಟೋರಿಗಳು ಹೊರಬರುತ್ತಿವೆ. ಅಂತೆಯೇ ಇದೀಗ ಮೆಪ್ಪಾಡಿ ವಿಮ್ಸ್ ಆಸ್ಪತ್ರೆಯ ನರ್ಸಿಂಗ್ ಕಾಲೇಜು ಆಡಳಿತ ಸಿಬ್ಬಂದಿ ನೀತು ಜೋಜೊ ಅವರ ಮರಣಹೊಂದಿರುವ ಮಾಹಿತಿ ಲಭ್ಯವಾಗಿದೆ.
ಕಳೆದ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಭೂಕುಸಿತದ ಭಾರೀ ವಾಸನೆಯಿಂದ ನೀತು ಜೋಜೊ ಎಚ್ಚರಗೊಂಡಿದ್ದಾರೆ. ಅವರು ಮಲಗುವ ಕೋಣೆಯೊಳಗೆ ನೀರಿನ ಘೋರ ಶಬ್ದವು ಆಕೆಯನ್ನು ದಂಗುಬಡಿಸಿದೆ.
ನೀತು ತಕ್ಷಣವೇ ತನ್ನ ಪತಿ ಜೋಜೋ ವಿ ಜೋಸೆಫ್ ಅವರನ್ನು ಎಬ್ಬಿಸಿದರು. ಚೂರಲ್ಮಲಾ ಹೈಸ್ಕೂಲ್ ರಸ್ತೆಯಲ್ಲಿರುವ ತಮ್ಮ ಮನೆಗೆ ನೀರು ನುಗ್ಗಿರುವುದನ್ನು ಅವರು ಅರಿತುಕೊಂಡರು. ಹೊರಗೆ ನೋಡಿದರೆ ವಾಹನಗಳು ಕೊಚ್ಚಿಕೊಂಡು ಅಂಗಳಕ್ಕೆ ಬಂದಿದ್ದು, ಕೆಸರಿನಿಂದ ಮುಚ್ಚಲ್ಪಟ್ಟಿದ್ದವು. ಇದರಿಂದ ಮತ್ತಷ್ಟು ಭಯಗೊಂಡ ಆಕೆ ಎಲ್ಲರಿಗೂ ಕರೆ ಮಾಡಲು ಪ್ರಾರಂಭಿಸಿದ್ದಾರೆ.
ಕೆಲವೇ ನಿಮಿಷಗಳಲ್ಲಿ ನದಿಯ ಬಳಿ ವಾಸಿಸುವ 7 ಕುಟುಂಬಗಳು ಬೆಟ್ಟದ ಮೇಲಿರುವ ನೀತು ಮನೆಯಲ್ಲಿ ಆಶ್ರಯ ಪಡೆದರು. ಭೂಕುಸಿತದಿಂದ ಮನೆ ಕಳೆದುಕೊಂಡಿದ್ದರು. ಮಧ್ಯರಾತ್ರಿ 1.30ಕ್ಕೆ ಗದ್ಗದಿತಳಾಗಿ ನೀತು ಆಸ್ಪತ್ರೆಗೆ ಕರೆ ಮಾಡಿದ್ದಾರೆ. ಚೂರಲ್ಮಲಾದಲ್ಲಿ ಭೂಕುಸಿತವಾಗಿದೆ, ನಮ್ಮ ಮನೆಯಲ್ಲಿ ನೀರು ತುಂಬಿದೆ. ದಯವಿಟ್ಟು ನಮ್ಮನ್ನು ರಕ್ಷಿಸಲು ಯಾರನ್ನಾದರೂ ಕಳುಹಿಸುತ್ತೀರಾ ಎಂದು ಕಣ್ಣೀರು ಹಾಕಿದ್ದಾರೆ.
ಇದಾದ ಬಳಿಕ ಅಂದರೆ 2.18ಕ್ಕೆ ಮತ್ತೆ ಆಸ್ಪತ್ರೆಗೆ ಕರೆ ಮಾಡಿದರು. ಈ ವೇಳೆ ನೀತು, ನಾವು ಈಗ ನಮ್ಮ ಮನೆಯಿಂದ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದೇವೆ. ಇನ್ನೊಂದು ಭೂಕುಸಿತವಾದರೆ ನಾವೆಲ್ಲರೂ ಉಳಿಯುವುದಿಲ್ಲ ಎಂದು ಡ್ಯೂಟಿ ಮ್ಯಾನೇಜರ್ಗೆ ಅತ್ತುಕೊಂಡೇ ಹೇಳಿದ್ದರಂತೆ.
ಕೂಡಲೇ ನೀತು ಸ್ನೇಹಿತರು ಆಸ್ಪತ್ರೆಯಿಂದ ಹೊರಟಿದ್ದು, ಮುಂಜಾನೆ 2.30 ರ ಹೊತ್ತಿಗೆ ಚೂರಲ್ಮಲಾವನ್ನು ತಲುಪಿದರು. ಆದರೆ ಅದಾಗಲೇ ನದಿಯ ಮೇಲಿನ ಸೇತುವೆ ಕೊಚ್ಚಿಹೋಗಿತ್ತು. ಅಲ್ಲದೇ ನೀತು ಮನೆಗೆ ಹೋಗುವ ರಸ್ತೆ ಕೂಡ ಕೊಚ್ಚಿಹೋಗಿತ್ತು. ಪರಿಣಾಮ ನೀತು ರಕ್ಷಣೆಗೆ ಬಂದ ಸ್ನೇಹಿತರು ಅಸಹಾಯಕರಾಗಿ ನಿಂತರು.
ನೀತು ಮನೆಗೆ ಸಾಗುವಾಗ ಇದ್ದ ಚಿಕ್ಕ ತೊರೆಯೊಂದು ನದಿಯಾಗಿಬಿಟ್ಟಿತ್ತು ಎಂದು ಸಹೋದ್ಯೋಗಿಯೋರ್ವರು ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಮಧ್ಯರಾತ್ರಿ 2.50ಕ್ಕೆ ಆಸ್ಪತ್ರೆಯವರು ನೀತು ಅವರನ್ನು ವಾಪಸ್ ಕರೆಸಿಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಅಷ್ಟೊತ್ತಿಗಾಗಲೇ ಆಕೆಯ ಮನೆಯ ಹಿಂದೆ- ಮುಂದುಗಡೆ ನೀರು ಧುಮ್ಮಿಕ್ಕುತ್ತಿತ್ತು. ಮುಂಡನಲ್ಲಿ ಭೂಕುಸಿತವು ನದಿಯನ್ನು ನಮ್ಮ ಕಡೆಗೆ ತಿರುಗಿಸಿದೆ ಎಂದು ನಾನು ಭಾವಿಸುತ್ತೇನೆ. ಸದ್ಯಕ್ಕೆ ನಮ್ಮ ಮನೆ ಮಾತ್ರ ಸುರಕ್ಷಿತ ಸ್ಥಳವಾಗಿದೆ. ಆದ್ದರಿಂದ ನಾವು ಈ ಸ್ಥಳದಿಂದ ಹೊರಬರಲು ಸಾಧ್ಯವಿಲ್ಲ. ನಮ್ಮನ್ನು ಹೇಗಾದರೂ ಮಾಡಿ ರಕ್ಷಣೆ ಮಾಡಿ ಎಂದು ನೀತು ಕೇಳಿಕೊಂಡಿದ್ದರು.
ಸ್ವಲ್ಪ ಸಮಯದ ನಂತರ ನೀತು ಅವರ ಮನೆ ಕೊಚ್ಚಿಕೊಂಡು ಹೋಯಿತು ಮತ್ತು ನೀತು ಅಜ್ಞಾತವಾಗಿ ಹೋದರು. ಇದು ಈ ಪ್ರದೇಶದಲ್ಲಿ ಸಂಭವಿಸಿದ ಮೂರನೇ ಭೂಕುಸಿತವಾಗಿದೆ. ಆಕೆಯ ಪತಿ ಜೋಜೊ, ಅವರ ಐದು ವರ್ಷದ ಮಗ ಮತ್ತು ಜೋಜೋ ಅವರ ಪೋಷಕರು ಸುರಕ್ಷಿತವಾಗಿದ್ದಾರೆ.
ನೀತು ಅವರಲ್ಲದೆ ಆಸ್ಪತ್ರೆಯು, ನರ್ಸಿಂಗ್ ಸಹಾಯಕರಾದ ಶಫೀನಾ ಎಎಂ ಮತ್ತು ದಿವ್ಯಾ ಎಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸಿಬ್ಬಂದಿ ಬಿಜೇಶ್ ಆರ್ ಅವರನ್ನು ಕೂಡ ಕಳೆದುಕೊಂಡಿದೆ.
ಸಹಾಯಕ್ಕಾಗಿ ನೀತು ಅವರು ಮಾಡಿದ ಕರೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….