ಅದೊಂದು ದೊಡ್ಡ ಕಾಡು. ಅಲ್ಲೊಂದು ಸರೋವರ, ಸಮೀಪವೇ ಸಾಕಷ್ಟು ಹಸಿರು ಹುಲ್ಲು ಬೆಳೆದಿತ್ತು. ಒಂದು ದಿನ ಅಲೆದಾಡುತ್ತಾ ಬರುತ್ತಿದ್ದ ಕುದುರೆಗೆ ಈ ಮೇವು ಕಂಡಿತು. ಅದು ಮೇವಿನ ರುಚಿ ಕಂಡು, ನೀರು ಕುಡಿದು ಅಲ್ಲೇ ಹಾಯಾಗಿರತೊಡಗಿತು.
ಮತ್ತೆ ಕೆಲವು ದಿನಗಳಲ್ಲಿ ಒಂದು ಕೋಣ ಬಂದು ಸೇರಿಕೊಂಡಿತು ಎರಡು ಗೆಳೆಯರಾದವು. ಸಾಕಷ್ಟು ಆಹಾರ ನೀರು ದೊರೆಯಿತು. ಕೋಣ ಮತ್ತು ಕುದುರೆ ತಿಂದು ಹಾಯಾಗಿ ಓಡಾಡಿಕೊಂಡು ಒಳ್ಳೆಯ ಸ್ನೇಹಿತರಾದವು. ಆದರೆ ಆ ವರ್ಷ ಸಾಕಷ್ಟು ಮಳೆ ಬರಲಿಲ್ಲ..! ಹಸಿರು ಹುಲ್ಲು ಸ್ವಲ್ಪ ಮಾತ್ರ ಬೆಳೆಯಿತು.
ಬೇಸಿಗೆಯಲ್ಲಿ ಅದೂ ಒಣಗಿ, ಸರೋವರವು ಬತ್ತಿತು. ಕುದುರೆ ಕೋಣಗಳಿಗೆ ಆಹಾರ ಸಾಕಾಗಲಿಲ್ಲ. ಇದರಿಂದ ಮನಸ್ತಾಪ ಉಂಟಾಯಿತು. ಒಂದು ದಿನ ಕೋಣ ಮೇವು ಮೇಯುತಿದ್ದಲ್ಲಿಗೆ ಬಂದ ಕುದುರೆ, ಕೋಣ ತಿನ್ನುತ್ತಿದ್ದ ಮೇವಿಗೆ ಬಾಯಿ ಹಾಕಿತು. ಕೋಣನಿಗೆ ಸಿಟ್ಟು ಬಂದು ತನ್ನ ಚೂಪಾದ ಕೋಡಿನಿಂದ ಕುದುರೆಯನ್ನು ತಿವಿಯಿತು. ಕುದುರೆಗೆ ಬಲವಾಗಿ ಪೆಟ್ಟಾಯಿತು. ಇದರಿಂದ ಕೋಣನ ಮೇಲೆ ಸಿಟ್ಟು ಬಂದಿತು.
ಕುದುರೆ ಕೋಣಕ್ಕೆ ಹೆದರಿಕೊಂಡು ಹತ್ತಿರ ಹೋಗಲು ಹೆದರಿತು. ಆಹಾರ ಇಲ್ಲವಾಯಿತು. ಏನಾದರೂ ಮಾಡಿ ಈ ಕೋಣವನ್ನು ಓಡಿಸಿದರೆ ಅಲ್ಲಿ ಬೆಳೆಯುವ ಹುಲ್ಲು ತನಗೆ ಸಾಕಾಗುತ್ತದೆ ಎಂದುಕೊಂಡಿತು. ಕೋಣನನ್ನು ಹೊಡೆದು ಸಾಯಿಸಬೇಕು ಇಲ್ಲ ಬೇರೆ ಕಡೆ ಓಡಿಸಬೇಕು ಏನು ಮಾಡಲಿ ಎಂದು ಯೋಚಿಸಿತು. ಕಾಡಿನ ಸಿಂಹಕ್ಕೆ ಹೇಳಬಹುದು ಆದರೆ ಕಾಡಿನ ಸಿಂಹ ತನ್ನನ್ನೇ ತಿಂದು ಬಿಟ್ಟರೆ, ಯೋಚನೆ ಬಂದ ಕೂಡಲೇ ಬೇಡ ಎಂದುಕೂಂಡು ಮತ್ತೊಂದು ಉಪಾಯ ಹುಡುಕಿತು.
ಕಾಡಿನ ಪ್ರಾಣಿಗಳ ಸಹವಾಸವೇ ಬೇಡ. ಕಾಡಿನ ಆಚೆ ಹಳ್ಳಿಗೆ ಹೋಗಿ ಮನುಷ್ಯನಿಗೆ ಹೇಳಿದರೆ ಈ ಕೆಲಸವಾಗುತ್ತದೆ ಎಂದು ಕೊಂಡು, ಒಂದು ಹಳ್ಳಿಗೆ ಬಂದಿತು.
ಅಲ್ಲೊಬ್ಬ ರೈತ ನೇಗಿಲಿಂದ ಹೊಲ ಉಳುತ್ತಿದ್ದ. ಅವನ ಹತ್ತಿರವಿದ್ದ ಒಂದೇ ಎತ್ತು, ಇನ್ನೊಂದು ಎತ್ತಿಗೆ ಬದಲಾಗಿ ಮಗನನ್ನೇ ನಿಲ್ಲಿಸಿ ಉಳುತ್ತಿದ್ದ. ಕುದುರೆ ನೋಡಿತು. ಈ ಮನುಷ್ಯ ಸರಿಯಾದ ವ್ಯಕ್ತಿ ಎಂದು ಅವನ ಬಳಿ ಬಂತು. ಮನುಷ್ಯ ನೀನು ಬಹಳಷ್ಟು ಕಷ್ಟ ಪಡುತ್ತಿರುವೆ. ನಿನಗೆ ನಾನೊಂದು ಉಪಾಯ ಹೇಳುತ್ತೇನೆ ನನ್ನ ಜೊತೆ ಬಲವಾದ ಕೋಣವಿದೆ. ನೀನು ಅದನ್ನು ತಂದುಕೊಂಡರೆ ಹೊಲ ಉಳಲು ಸಹಾಯವಾಗುತ್ತದೆ. ಆ ಕೋಣವನ್ನು ನಾನೇಕೆ ತರಬೇಕು ಎಂದ.
ಕುದುರೆ ತನ್ನ ಕಥೆಯನ್ನು ಹೇಳಿತು. ಆದರೆ ಆ ಕೋಣವನ್ನು ಅಲ್ಲಿಂದ ಹೇಗೆ ತರುವುದು ಎಂದು ಕೇಳಿದ. ಕುದುರೆ ಉಪಾಯ ಹೇಳಿತು. ಅದಕ್ಕೆ ಒಂದೆರಡು ಪೆಟ್ಟು ಕೊಟ್ಟರೆ ಕೆಳಗೆ ಬೀಳುತ್ತದೆ. ಹಗ್ಗ ಕಟ್ಟಿ ಮನೆಗೆ ತಂದರಾಯಿತು, ಮನುಷ್ಯನಿಗೆ ಮನಸ್ಸಿನಲ್ಲಿ ಸಂತೋಷವೋದರೂ, ತೋರ್ಪಡಿಸಿಕೊಳ್ಳದೆ ಹೌದು ಆ ಕೋಣವನ್ನು ತರುವುದರಿಂದ ನಿನಗೇನು ಅನುಕೂಲ ಎಂದನು. ಆಗ ಕುದುರೆ, ಮೇವಿಗಾಗಿ ಗುದ್ದಾಟವಾಗಿದ್ದು ಕೋಡಿನಿಂದ ಚುಚ್ಚಿದ್ದು, ಎಲ್ಲವನ್ನು ಒದರಿತು.
ರೈತ ಕೇಳಿದ. ನೀನು ಹೇಳುವುದು ಸರಿ. ಆದರೆ ಆ ಕಾಡುಕೋಣ ನನ್ನನ್ನೇ ಗುದ್ದಿದರೆ ನಾನೇನು ಮಾಡಲಿ ಎಂದು ಮನುಷ್ಯ ಕೇಳಿದ. ಕುದುರೆ ಉತ್ಸಾಹದಿಂದ ಹೇಳಿತು. ನೀನು ಚಿಂತಿಸಬೇಡ ನಾನು ನಿನಗೆ ಸಹಾಯ ಮಾಡುವೆ ನನ್ನ ಬೆನ್ನ ಮೇಲೆ ನೀನು ಕೂತರೆ, ನಾನು ಓಡುವೆ ಕೋಣನ ಹತ್ತಿರವೇ ಓಡುತ್ತೇನೆ ನೀನು ಬಾರುಕೋಲಿನಿಂದ ಹೊಡಿ, ನಾನು ಅಲ್ಲಿಂದ ಇಲ್ಲಿಗೆ ಓಡಾಡುತ್ತೇನೆ ಮತ್ತೆರಡು ಹೊಡೆತ ಹೊಡಿ, ಏಟು ತಾಳಲಾರದೆ ಬೀಳುತ್ತದೆ ನೀನು ತಂದು ಕೊಟ್ಟಿಗೆಯಲ್ಲಿ ಕಟ್ಟಿಕೊ ಎಂದಿತು.
ರೈತನಿಗೆ ಅದರ ಸಲಹೆ ಹಿಡಿಸಿತು. ಆದರೆ ಅವನಿಗೆ ಕುದುರೆ ಸವಾರಿ ಗೊತ್ತಿಲ್ಲ.
ಇದನ್ನು ಹೇಳಿದಾಗ ಕುದುರೆ ಇದಕ್ಕೂ ಸಲಹೆ ಹೇಳಿತು. ನೀನು ನನ್ನ ಬೆನ್ನ ಮೇಲೆ ಕೂರು ನಾನು ಹಗುರವಾಗಿ ಓಡುತ್ತೇನೆ ಎರಡು ಮೂರು ದಿನ ಹೋದರೆ ನಿನಗೆ ಚೆನ್ನಾಗಿ ಅಭ್ಯಾಸವಾಗುತ್ತದೆ ಎಂದಿತು. ಆದರೆ ನನಗೆ ಹತ್ತಲು ಬರುವುದಿಲ್ಲ ಎಂದನು.
ಕುದುರೆ ಉಪಾಯ ಹೇಳಿತು ನನ್ನ ಬೆನ್ನಿಗೆ ಜೀನು ಕಟ್ಟಿ, ಮುಖಕ್ಕೆ ಲಗಾಮು ಹಾಕು. ರೈತ ಅದು ಹೇಳಿದಂತೆ ಮಾಡಿದ ಅದರ ಸಹಾಯದಿಂದ ಕುದುರೆ ಬೆನ್ನ ಏರಿ ಕುಳಿತ. ಹೀಗೆ ಒಂದೆರಡು ಸಲ ಓಡಾಡಿದಾಗ ಮನುಷ್ಯನಿಗೆ ಕುದುರೆ ಸವಾರಿ ರೂಡಿಯಾಯಿತು.
ಮತ್ತೊಂದು ದಿನ, ಕೈಯಲ್ಲಿ ಬಾರು ಕೋಲು ಹಿಡಿದು, ಕುದುರೆ ಹತ್ತಿ ಸವಾರಿ ಮಾಡುತ್ತಾ, ಕೋಣನನ್ನು ಹಿಡಿದು ತರಲು ಕಾಡಿನ ಕಡೆ ಹೋದ. ಕೋಣ ಹುಲ್ಲು ಮೇಯುತ್ತಿತ್ತು. ಕುದುರೆ ಅದರ ಹತ್ತಿರವೇ ಓಡಿತು ಮನುಷ್ಯ ಬಾರು ಕೋಲಿನಿಂದ ಚೆನ್ನಾಗಿ ಹೊಡೆದ, ಮತ್ತೆ ಕುದುರೆ ತಿರುಗಿ ಬಂದು ಕೋಣನ ಹತ್ತಿರವೇ ಓಡಿತು ಮತ್ತೆ ಹೊಡೆದ, ಹೀಗೆ ಮನುಷ್ಯ ಎರಡು ಮೂರು ಸಲ ಹೊಡೆಯುತ್ತಿದ್ದಂತೆ ಕೋಣ ನೆಲಕ್ಕೆ ಬಿತ್ತು. ಆಮೇಲೆ ಅದನ್ನು ಹಗ್ಗದಿಂದ ಕಟ್ಟಿ ತನ್ನ ಮನೆಗೆ ತಂದು ಕಟ್ಟಿ ಹಾಕಿದ.
ಕುದುರೆಗೆ ಬಹಳ ಖುಷಿಯಾಯಿತು ಇನ್ನು ಯಾರ ಹಂಗೂ ಇಲ್ಲ ಆ ಹುಲ್ಲು ಪೂರ್ತಿ ನನ್ನದೇ ಎಂದುಕೊಂಡಿತು. ರೈತ ಹತ್ತಿರ ಬಂದ ಕುದುರೆ ಹೇಳಿತು. ಇನ್ನು ನನ್ನ ಜೀನು ಬಿಚ್ಚಿ , ಲಗಾಮು ತೆಗೆದು ನನ್ನನ್ನು ಮುಕ್ತಗೊಳಿಸು ಎಂದಿತು.
ರೈತ ಗಹಗಹ ನಕ್ಕು ಹೇಳಿದ ಇನ್ನು ನಿನ್ನ ಜೀನು ಬಿಚ್ಚುವುದು ಲಗಾಮು ತೆಗೆವ ತಾಪತ್ರಯ ನನಗಿಲ್ಲ. ನೀನು ಮುಕ್ತನಾಗುವ ಯೋಚನೆಯನ್ನು ಮಾಡಬೇಡ ಅದರಲ್ಲೇ ನಿನ್ನ ಸಂತೋಷ ಇರುವುದು. ನಿನ್ನ ಮೇಲೆ ಕುಳಿತು ನಾನು ಎಲ್ಲಾ ಕಡೆ ಸಂಚರಿಸುತ್ತೇನೆ. ಸವಾರಿ ಮಾಡುವುದು ನನಗೆ ಬಹಳ ಖುಷಿಕೊಡುತ್ತಿದೆ ಆಕಾಶಕ್ಕೆ ಹಾರಿದಷ್ಟು ಸಂತೋಷ ಪುಟಿಯುತ್ತೆ ನನ್ನ ಮನೆಯಲ್ಲಿ ಇರು ಎಂದನು…!!
ಇದನ್ನು ಕೇಳಿದ ಕುದುರೆ ಅಯ್ಯೋ ನಾನೆಂಥ ಮೂರ್ಖ, ಕೋಣನನ್ನು ಹಿಡಿದುಕೊಡಲು ಹೋಗಿ ನಾನೇ ಬಂದು ರೈತನ ಗುಲಾಮನಾದೆನಲ್ಲಾ ಬೇಜಾರು ಮಾಡಿಕೊಂಡಿತು.
‘ಮಾಡಬಾರದ್ದನ್ನು ಮಾಡಿದರೆ ಆಗಬಾರದೇ ಆಗುವುದು’
ಕೃಪೆ: ಸಾಮಾಜಿಕ ಜಾಲತಾಣ.(ಲೇಖಕರ ಮಾಹಿತಿ ಲಭ್ಯವಾಗಿಲ್ಲ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….