ಚಿಕ್ಕಮಗಳೂರು, (ಸೆ.11); ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರಿಗೆ ಮಹಿಳೆಯೋರ್ವರು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದ್ದು, ಈ ಸಂಬಂಧ ಹಲ್ಲೆ ನಡೆಸಿರುವ ಮಹಿಳೆ ಹಾಗೂ ಅವರ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಇರ್ಫಾನ್ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸಹೋದರಿ ತಸ್ಲಿಂ ಅವರೊಂದಿಗೆ ಮಂಗಳವಾರ ಆಸ್ಪತ್ರೆಗೆ ಆಗಮಿಸಿದ್ದರು. ತುರ್ತು ಘಟಕದಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ಡಾ.ವೆಂಕಟೇಶ್ ಅವರು ಇರ್ಫಾನ್ ಅವರಿಗೆ ಚಿಕಿತ್ಸೆ ನೀಡಿ, ಬಳಿಕ ಅದೇ ಸ್ಥಳದಲ್ಲಿರುವ ಕೊಠಡಿಯಲ್ಲಿ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಾಲೋಚನೆ ನಡೆಸಿರುವ ವೇಳೆ ತಸ್ಲಿಂ ಅವರು ದಿಢೀರನೇ ಹಲ್ಲೆ ನಡೆಸಿ ಚಪ್ಪಲಿಯಿಂದ ಹೊಡೆದಿದ್ದಾರೆ.
ಈ ವಿಷಯ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಯುತ್ತಿದ್ದಂತೆ ಕರ್ತವ್ಯ ಮೊಟಕುಗೊಳಿಸಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದರು. ನಂತರ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಮೋಹನ್ಕುಮಾರ್ ವೈದ್ಯರೊಂದಿಗೆ ಎಸ್ಪಿ ಕಚೇರಿಗೆ ತೆರಳಿ ಎಎಸ್ಪಿ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಆಸ್ಪತ್ರೆಗೆ ಆಗಮಿಸಿದ ಎಎಸ್ಪಿ ಕೃಷ್ಣಮೂರ್ತಿ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ವೈದ್ಯರ ಹಾಗೂ ಸಿಬ್ಬಂದಿ ರಕ್ಷಣೆಗೆ ನಾವಿದ್ದೇವೆ. ಆಸ್ಪತ್ರೆಯಲ್ಲಿ ಈಗಾಗಲೇ ಪೊಲೀಸರು ಕರ್ತವ್ಯ ನಿರ್ವಹಿಸುತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ರೋಗಿಗಳ ಹಿತದೃಷ್ಟಿಯಿಂದ ಪ್ರತಿಭಟನೆಯನ್ನು ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು.
ಆದರೆ ಪ್ರತಿಭಟನಾಕಾರರು ಹಲ್ಲೆ ನಡೆಸಿರುವ ಮಹಿಳೆಯನ್ನು ಬಂಧಿಸುವವರೆಗೂ ಪ್ರತಿಭಟನೆ ಯಿಂದ ಹಿಂದೆ ಸರಿಯಲ್ಲ ಎಂದು ಪಟ್ಟುಹಿಡಿದರು. ಬಳಿಕ ಆಸ್ಪತ್ರೆಯಿಂದ ಮೆರವಣಿಗೆ ಹೊರಟ ವೈದ್ಯರು ಹಾಗೂ ಸಿಬ್ಬಂದಿ ನಗರ ಪೊಲೀಸ್ ಠಾಣೆಯ ಎದುರು ಧರಣಿ ಕುಳಿತರು. ಇವರಿಗೆ ಕನ್ನಡ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಡಾ.ವೆಂಕಟೇಶ್ ನೀಡಿರುವ ದೂರಿನನ್ವಯ ಮಹಿಳೆ ಹಾಗೂ ಆತನ ಸಹೋದರನನ್ನು ಬಂಧಿಸಿರುವ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರತರಿಗೆ ತಿಳಿಸುತ್ತಿದ್ದಂತೆ ವೈದ್ಯರು ಪ್ರತಿಭಟನೆ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾದರು.
ಪ್ರತಿ ದೂರು: ತಮ್ಮ ಸಹೋದರ ಇರ್ಫಾನ್ಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ.ವೆಂಕಟೇಶ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಸ್ಲಿಂ ಅವರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsapp, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–