ಬೆಂಗಳೂರು: ಸರಿಯಾದ ದಾರಿಯಲ್ಲಿ ನಡೆಯುವುದೇ ಸಂತೋಷಕ್ಕೆ ರಹದಾರಿಯಾಗಿದೆ. ಅದೇ ಧರ್ಮವಾಗಿದೆ. ಇದನ್ನೇ ನಮ್ಮ ನೆಲೆದಲ್ಲಿ ಹುಟ್ಟಿದ್ದ ಹಾಗೂ ಈಗಲೂ ಬದುಕುತ್ತಿರುವ ಸಾಧು-ಸಂತರು ವಿವಿಧ ಮಾರ್ಗದಲ್ಲಿ ನಮಗೆ ತಿಳಿಸುತ್ತಿದ್ದಾರೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಲ್ಯಾಣ ಕಾರ್ಯಕ್ರಮ ಮತ್ತು ನಮಃ ಶಿವಾಯ ಸ್ತೋತ್ರ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಧನಕರ್, ಧರ್ಮಮಾರ್ಗದಲ್ಲಿ ಜೀವನ ಸಾಗಿಸುವುದೇ ನಿಜವಾದ ಧರ್ಮವಾಗಿದೆ. ಸಮಾನತೆಯ ಧರ್ಮವಾಗಿದೆ. ಅದನ್ನು ತಿರುಚುವ ಮತ್ತು ದಾರಿತಪ್ಪಿಸುವ ಕೆಲಸಗಳನ್ನು ಸಹ ಶತಮಾನಗಳ ಕಾಲದಿಂದ ಹೊರಗಿನ ಶಕ್ತಿಗಳು ಮಾಡುತ್ತಾ ಬಂದವು. ಆದರೆ ನಮ್ಮ ಸನಾತನ ಧರ್ಮದಲ್ಲಿರುವ ಸತ್ಯ ಅದನ್ನು ಯಶಸ್ವಿಯಾಗಿ ಮೆಟ್ಟಿನಿಂತು ಮತ್ತೆ ವಿಶ್ವಗುರುವಾಗುವತ್ತ ಹೊರಟಿದೆ ಎಂದರು.
ಆದಿಶಂಕರಾಚಾರ್ಯರ ಶಿಷ್ಯ ಪರಂಪರೆ: ಶೃಂಗೇರಿ ಶಂಕರಮಠದ ಕಿರಿಯ ಸ್ವಾಮೀಜಿ ಶ್ರೀ ವಿಧುಶೇಖರಭಾರತೀ ಹಲವು ಗ್ರ ಸ್ವಾಮೀಜಿ ಆಶೀರ್ವಚನ ನೀಡಿ, ಆದಿಶಂಕರಾಚಾರ್ಯರ ಶಿಷ್ಯ ಪರಂಪರೆ ಉತ್ಕೃಷ್ಟವಾಗಿದೆ. ಅದನ್ನು ಈಗಿನ ಜಗದ್ಗುರುಗಳಾದ ಭಾರತೀತೀರ್ಥ ಮಹಾಸ್ವಾಮಿಗಳು ಸಹ ಮುಂದುವರಿಸಿಕೊಂಡು ಬಂದಿದ್ದಾರೆ. ಇಂತಹ ಪರಮಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆವಕಾಶ ಸಿಕ್ಕಿದ್ದು ಮರೆಯಲಾಗದ ಅನುಭವ ವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಂಕರಾಚಾರ್ಯರು ತಪ್ಪಾದ ಮಾರ್ಗದಲ್ಲಿ ನಡೆಯುತ್ತಿದ್ದ ಅಂದಿನ ಸಾಮಾಜವನ್ನು ಮತ್ತು ಜನರನ್ನು ತಮ್ಮ ಪಾಂಡಿತ್ಯದ ಮೂಲಕ ವಾದ ಮಂಡಿಸುವುದರೊಂದಿಗೆ ಸನ್ಮಾರ್ಗಕ್ಕೆ ತಂದರು. ಹಲವು ಗ್ರಂಥಗಳನ್ನು ರಚಿಸಿ ಮುಂದಿನ ಪೀಳಿಗೆಗೆ ಸನ್ಮಾರ್ಗವನ್ನು ತೋರಿಸಿದರು. ದೇಶದ ನಾಲ್ಕು ದಿಕ್ಕುಗಳಲ್ಲಿ ಸುಮಾರು 2 ಸಾವಿರ ಕಿ.ಮೀ ಅಂತರದಲ್ಲಿ ಪೀಠಗಳನ್ನು ಸನಾತನ ಧರ್ಮದ ಉಳಿವಿಗಾಗಿ ಸ್ಥಾಪಿಸಿದರು ಎಂದು ಹೇಳಿದರು.
ಧರ್ಮಕಾರ್ಯದಲ್ಲಿ ಶೃಂಗೇರಿ ಮಠ ಮುಂಚೂಣಿ: ಡಿಸಿಎಂ ಡಿಕೆ ಶಿವಕುಮಾರ್
ಕರ್ನಾಟಕದಾದ್ಯಂತ ಧರ್ಮಕಾರ್ಯಗಳ ಮೂಲಕ ಜನರ ಗೌರವ ಉಳಿಸಿಕೊಂಡಿರುವ ಮಠಗಳಲ್ಲಿ ಶೃಂಗೇರಿ ಮಠವು ಮುಂಚೂಣಿಯಲ್ಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಶ್ಲಾಘಿಸಿದ್ದಾರೆ. ನಮಃ ಶಿವಾಯ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಭಕ್ತಿಯ ಸಾಗರದಲ್ಲಿ ಮುಳುಗಿದ್ದೇವೆ.
ಶೃಂಗೇರಿಯ ಭಾರತೀ ತೀರ್ಥ ಮಹಾಸ್ವಾಮೀಜಿಗಳು ಸನ್ಯಾಸ ಸ್ವೀಕರಿಸಿ 50 ವರ್ಷಗಳ ಕಾಲ ಧರ್ಮವನ್ನು ಉಳಿಸುವ ಕೆಲಸ ಮಾಡಿದ್ದಾರೆ. ನಮ್ಮ ಪ್ರಯತ್ನಗಳು ವಿಫಲವಾಗಬಹುದು ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ. ಶ್ರೀಗಳು ಐವತ್ತು ವರ್ಷಗಳ ಕಾಲ ನಮ್ಮೆಲ್ಲರ ಒಳಿತಿಗೆ ಪ್ರಾರ್ಥನೆ ಮಾಡಿದ್ದಾರೆ ಎಂದು ಹೇಳಿದರು.
ನನಗೂ ಶೃಂಗೇರಿ ಮಠಕ್ಕೂ ಇರುವ ಸಂಬಂಧ ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ. ಭಕ್ತಿಯಿದ್ದರೆ ಶಿಲೆಯಲ್ಲೂ ಭಗವಂತನನ್ನು ಕಾಣಬಹುದು ಎಂದು ಡಿಸಿಎಂ ಅಭಿಪ್ರಾಯ ಪಟ್ಟರು.
ಈ ವೇಳೆ ಕೇಂದ್ರ ಸಚಿವ ಪ್ರಲ್ತಾದ್ ಜೋಶಿ, ವಿ. ಸೋಮಣ್ಣ, ಕೃಷ್ಣರಾಜನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠಾಧೀಶ ಶ್ರೀ ಶಂಕರಭಾರತಿ ಮಹಾಸ್ವಾಮಿ ಸೇರಿದಂತೆ ಅನೇಕರಿದ್ದರು.