ಚನ್ನಪಟ್ಟಣ: ಹೆಚ್ಡಿ ಕುಮಾರಸ್ವಾಮಿ ಮಾತು ನಂಬಿ ಡಿಕೆ ಸುರೇಶ್ ಅವರ ಸೋಲಿಗೆ ಕಾರಣನಾದೆನೆಂಬ ಬೇಸರ ಕಾಡುತ್ತಿದೆ. ಆದರೆ ಕುಮಾರಸ್ವಾಮಿ ನಂಬಿಕೆ ದ್ರೋಹ ಮಾಡಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹೇಳಿದರು.
ಹೊಂಗನೂರು ಜಿಪಂ ವ್ಯಾಪ್ತಿಯ ತಗಚಗೆರೆ ಹಾಗೂ ಭೂಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದ ಚುನಾವಣೆಯನ್ನು ನಾವು ಯಾರೂ ಬಯಸಿರಲಿಲ್ಲ. ಚನ್ನಪಟ್ಟಣ ಬೇಡ ಎಂದು ಹೇಳದೆ ಕೇಳದೆ ಮಂಡ್ಯಕ್ಕೆ ಹೋದ ಕಾರಣಕ್ಕೆ ನಾನಿಂದು ನಿಮ್ಮ ಮುಂದೆ ಅಭ್ಯರ್ಥಿಯಾಗಿ ನಿಂತಿದ್ದೇನೆ ಎಂದರು.
ಜಿಲ್ಲೆಯ ಜನರಿಗೆ ಕುಮಾರಸ್ವಾಮಿ ಏನು ಎಂಬುದು ಈಗ ಅರ್ಥವಾಗಿದೆ. ಅವರು ಇಲ್ಲಿಗೆ ಬರುವಾಗ ಏಕೆ ಬಂದರು, ಹೋಗುವಾಗ ಏಕೆ ಹೋದರು ಎಂಬುದು ಹೇಳಲಿಲ್ಲ. ಅಧಿಕಾರ ಹುಡುಕಿಕೊಂಡು ಮಂಡ್ಯಕ್ಕೆ ಹೋದ ಅವರು, ಅಲ್ಲಿ ಸಂಸದರಾಗಿ ಈಗ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ ಯೋಗೇಶ್ವರ್ ಆರೋಪಿಸಿದರು.
ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎನ್ನುವುದನ್ನು ಪ್ರತಿ ಹಳ್ಳಿಗಳಲ್ಲೂ ಪ್ರಶ್ನೆ ಮಾಡು ತಿದ್ದೇವೆ. ಜನರ ಕಷ್ಟ ಕೇಳದ ಕುಮಾರಸ್ವಾಮಿ ಯಾವ ನೈತಿಕತೆ ಹೊತ್ತುಕೊಂಡು ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಎಂಬುದನ್ನು ಜನರು ಪ್ರಶ್ನಿಸಬೇಕು. ಕುಮಾರಸ್ವಾಮಿ ಪುತ್ರ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಚನ್ನಪಟ್ಟಣದಲ್ಲಿ ಇದು ಇವರ ಕೊನೆಯ ಪ್ರಯತ್ನವಾಗಿದೆ ಎಂದು ಹೇಳಿದರು.
ಕಣ್ಣೀರು ಒರೆಸುವವನು ನಿಜವಾದ ನಾಯಕ. ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜನರಿಗೆ ಇವರ ಭಾವನಾತ್ಮಕತೆ, ಕಣ್ಣೀರು ಎಲ್ಲವೂ ಅರ್ಥವಾಗಿದೆ. ನಾಯಕನಾದವನು ಜನರ ಕಣ್ಣೀರನ್ನು ಒರೆಸಬೇಕೆ ಹೊರತು ಆತ ಕಣ್ಣೀರು ಹಾಕಬಾರದು. ಆಗ ಮಾತ್ರ ಆತ ನಾಯಕನಾಗಿ ಬೆಳೆಯುತ್ತಾನೆ ಎಂದು ಹೇಳಿದರು.
ನನ್ನ ತಮ್ಮನ ಇಲ್ಲಿ ನಿಲ್ಲಿಸಲು ಆಗ್ತಾ ಇರಲಿಲ್ವಾ..?
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾನು ಇಲ್ಲಿ ಉದ್ಯೋಗ ಮೇಳ ಮಾಡಿದ ನಂತರ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಉದ್ಯೋಗಮೇಳ ಮಾಡಿದ್ದಾರೆ. ಅದೇ ಕೆಲಸವನ್ನು ಅವರು ಚನ್ನಪಟ್ಟಣದಲ್ಲಿ ಯಾಕೆ ಮಾಡಲಿಲ್ಲ? ಇಲ್ಲಿನ ಯುವಕರಿಗೆ ಉದ್ಯೋಗ ಕೊಡಿಸಬಹುದಿತ್ತಲ್ಲವೇ? ಈ ಜನರಿಗೆ ಸಹಾಯ ಮಾಡುವ ಮನೋಭಾವ ನಿಮಗಿಲ್ಲ.
ಇಲ್ಲಿ ಜಾಗ ಖಾಲಿ ಮಾಡಿ ಯೋಗೇಶ್ವರ್ ಅವರಿಗೆ ತಬ್ಬಿಕೊಂಡೇ ಮೋಸ ಮಾಡಲು ಪ್ರಯತ್ನಿಸಿದೆ. ಅದು ಯೋಗೇಶ್ವರ್ ಅವರಿಗೆ ಅರ್ಥವಾಗಿ ಜನರಿಗೆ ಸಹಾಯ ಮಾಡಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅರಿತು ಕಾಂಗ್ರೆಸ್ ಸೇರಿದ್ದಾರೆ ಎಂದರು.
ನನ್ನ ತಮ್ಮನ ಇಲ್ಲಿ ನಿಲ್ಲಿಸಲು ಆಗ್ತಾ ಇರಲಿಲ್ವಾ..? ಆದರೆ ಸಿಪಿ ಯೋಗೇಶ್ವರ್ ಇಲ್ಲಿಯ ಮಗ, ನಿಷ್ಠಾವಂತ, ಅಭಿವೃದ್ಧಿ ಪರ ಕಾಳಜಿ ಇರೋನು.. ಅದಕ್ಕೆ ಆತನಿಗೆ ಟಿಕೆಟ್ ನೀಡಲಾಗಿದೆ.
ನಾನು ಹಾಗೂ ಸಿದ್ದರಾಮಯ್ಯ ಅವರು ವಿಧಾನ ಸಭೆ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದನಂತರ ಬೆಲೆಏರಿಕೆ ಸಮಸ್ಯೆ ಗೆ ಮುಕ್ತಿ ನೀಡಿ ನಿಮ್ಮ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ. ಇಂತಹ ಒಂದೇ ಒಂದು ಯೋಜನೆ ನೀಡದ ಕುಮಾರಣ್ಣ ಇಲ್ಲಿ ಬಂದು ಮತ ಕೇಳುತ್ತಿದ್ದಾರೆ.
ಈ ಭಾಗದ ಜನರ ಕಷ್ಟಕ್ಕೆ ಸ್ಪಂದಿಸಿದ್ದರೆ ಕುಮಾರಣ್ಣನಿಗೆ ಮತ ಕೇಳುವ ಹಕ್ಕಿತ್ತು. ಆದರೆ ನೀನು ಮತ ಕೇಳುವ ಹಕ್ಕು ಕಳೆದುಕೊಂಡಿದ್ದೀಯ. ನಿನ್ನನ್ನು ನಂಬಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಜನರನ್ನು ಕೈಬಿಟ್ಟು ಮಂಡ್ಯಕ್ಕೆ ಹೋಗಿದ್ದೀಯ. ಈಗ ಮತ್ತೆ ಬಂದು ಮತ ಕೇಳುತ್ತಿದ್ದೀಯಲ್ಲ, ನಿನಗೆ ಮತ ಕೇಳುವ ಹಕ್ಕಿದೆಯೇ? ಎಂದು ಪ್ರಶ್ನಿಸಿದರು.