ವಿಜಯಪುರ: ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿರುವ ಬಸನಗೌಡ ಪಾಟೀಲ್ ಯತ್ನಾಳ್ (Basana Gouda Patila Yatnal) ಬಿಜೆಪಿಗೆ ಪರ್ಯಾಯವಾಗಿ ಹೊಸ ಪಕ್ಷವನ್ನು ಕಟ್ಟುವುದಾಗಿ ಘೋಷಿಸಿದ್ದಾರೆ.
ಉಚ್ಚಾಟನೆ ಬಳಿಕ ಯುಗಾದಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ವಿಜಯದಶಮಿಯಂದು ಪಕ್ಷದ ಹೆಸರು, ಚಿಹ್ನೆ ಮುಂತಾದವುಗಳ ಕುರಿತು ಅಧಿಕೃತವಾಗಿ ಘೋಷಿಸುವುದಾಗಿ ಯತ್ನಾಳ್ ತಿಳಿಸಿದರು.
ಯತ್ನಾಳ್ ಅವರ ಉಚ್ಚಾಟನೆಗೆ ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶಗೊಂಡಿರುವ ಹಲವು ಲಿಂಗಾಯಿತ ಮುಖಂಡರು ಹಾಗೂ ಮಠಾಧೀಶರು ಯತ್ನಾಳ್ ಅವರಿಗೆ ಬೆಂಬಲ ಸೂಚಿಸಿದ್ದರು. ಜೊತೆಗೆ, ಅವರು ಹೊಸ ಪಕ್ಷ ಕಟ್ಟಿದರು ತಾವು ಸಂಪೂರ್ಣವಾಗಿ ನೆರವು ನೀಡುವುದಾಗಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದರು.
ಅಲ್ಲದೆ ಶನಿವಾರವಷ್ಟೇ ಬೆಂಗಳೂರಿನಲ್ಲಿ ಮಾತನಾಡಿದ್ದ ಯತ್ನಾಳ್, ಬಿಜೆಪಿ ನನ್ನನ್ನು ವಾಪಸ್ ಕರೆಸಿಕೊಳ್ಳಲಿದೆ. ಯಡಿಯೂರಪ್ಪ ಮತ್ತು ಅವರ ಮಗನ ಭವಿಷ್ಯ ಯುಗಾದಿ ಬಳಿಕ ಅಂತ್ಯಗೊಳ್ಳಲಿದೆ. 2028 ರಲ್ಲಿ ನಾನೇ ಸಿಎಂ ಆಗಲಿದ್ದೇನೆ ಎಂದಿದ್ದರು.