ದೊಡ್ಡಬಳ್ಳಾಪುರ: ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಡಾ.ವಿಜಯ್ ಕುಮಾರ್ (Dr.Vijay Kumar) ಅವರು ಜೆಡಿಎಸ್ ವರಿಷ್ಠರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (HD Deve Gowda) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ದೆಹಲಿಯ ದೇವೇಗೌಡರ ಸ್ವಗೃಹದಲ್ಲಿ ಭೇಟಿಯಾಗಿರುವ ಡಾ.ವಿಜಯ್ ಕುಮಾರ್ ಅವರು, ದೊಡ್ಡಬಳ್ಳಾಪುರದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಬಿಜೆಪಿಯೊಂದಿಗಿನ ಮೈತ್ರಿ ಮುಂತಾದ ವಿಚಾರಗಳ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ.
ಹರಿತಲೇಖನಿಗೆ ದೊರೆತಿರುವ ಉನ್ನತ ಮೂಲಗಳ ಮಾಹಿತಿ ಅನ್ವಯ, ಮಾಜಿ ಪ್ರಧಾನಿ ದೇವೇಗೌಡ ಅವರು ದೊಡ್ಡಬಳ್ಳಾಪುರದ ಹಿರಿಯ ಜೆಡಿಎಸ್ ಮುಖಂಡ ಹೆಚ್.ಅಪ್ಪಯ್ಯಣ ಅವರ ಅಕಾಲಿಕ ಅಗಲಿಕೆ ಕುರಿತು ಸಂತಾಪ ಸೂಚಿಸಿದ್ದಾರೆ.
ಮುಂದುವರಿದು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ತಾಲೂಕಿನಲ್ಲಿ ಸದೃಢಗೊಳಿಸುವ ನಿಟ್ಟಿನಲ್ಲಿ ಕಮಿಟಿ ರಚನೆ, ಪದಾಧಿಕಾರಿಗಳ ಬದಲಾವಣೆ ಮೂಲಕ ಬೂತ್ ಮಟ್ಟದಿಂದ ಜೆಡಿಎಸ್ ಪಕ್ಷವನ್ನು ಸದೃಢಗೊಳಿಸಲು ಸೂಚನೆ ನೀಡಿದ್ದಾರೆ.
ಅಲ್ಲದೆ ಮುಂಬರುವ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಸೂಚನೆ ಕಂಡು ಬರುತ್ತಿದ್ದು, ಈಗಿನಿಂದಲೇ ತಾಲೂಕಿನಲ್ಲಿ ಕಾರ್ಯಕರ್ತರ ಸಂಘಟನೆಗೊಳಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೆ ಇದೇ ಶನಿವಾರ ಡಾ.ವಿಜಯ್ ಕುಮಾರ್ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ.