ಚಿಕ್ಕಬಳ್ಳಾಪುರ (Harithalekhani): ಕ್ಯಾಂಟರ್ ಪಲ್ಟಿಯಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್ ನಲ್ಲಿದ್ದ ತಂದೆ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿ, ಗೃಹಿಣಿಯ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ (NH 44) ಮರಸನಹಳ್ಳಿ ಬಳಿ ಈಶ ಟೆಂಪಲ್ ಗೆ ಹೋಗುವ ಸ್ಥಳದಲ್ಲಿ ಶನಿವಾರ ನಡೆದಿದೆ.
ಮೃತರನ್ನು ತಾಲ್ಲೂಕಿನ ಬಂಡಹಳ್ಳಿಯ ನಿವಾಸಿಗಳಾದ ವೆಂಕಟೇಶ್(34 ವರ್ಷ) ಮತ್ತು ವಿಕ್ಷಿತಾ(5 ವರ್ಷ), ಗಾಯಾಳುವನ್ನು ರೂಪ (28 ವರ್ಷ) ಎಂದು ಗುರ್ತಿಸಲಾಗಿದ್ದು, ಗಾಯಾಳಯವನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ತೆರಳಿಸಲಾಗಿದೆ.

ಮೃತ ವೆಂಕಟೇಶ್ ತನ್ನ ಪತ್ನಿ ರೂಪ ಮತ್ತು ಮಗಳು ವಿಕ್ಷಿತಾಳೊಂದಿಗೆ ಬಂಡಹಳ್ಳಿಯಿಂದ ಸಂಬಂಧಿಕರ ಮದುವೆಗೆ ಚಿಕ್ಕಬಳ್ಳಾಪುರಕ್ಕೆ ತೆರಳಲು ಬೈಕ್ ನಲ್ಲಿ ಬರುತ್ತಿದ್ದಾಗ ಮರಸನಹಳ್ಳಿ ಬಳಿಯ ಈಶಾ ಟೆಂಪಲ್ ರಸ್ತೆಯಿಂದ ಬಂದ ಕಾರು ಏಕಾ ಏಕಿ ಹೆದ್ದಾರಿಯಲ್ಲಿ ತಿರುವು ಪಡೆದು ಕೊಂಡಾಗ, ಬಾಗೇಪಲ್ಲಿ ಕಡೆಯಿಂದ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದ ಕ್ಯಾಂಟರ್ ವಾಹನ ಎಡಕ್ಕೆ ತೆಗೆದು ಕೊಂಡಾಗ ಕ್ಯಾಂಟರ್ ವಾಹನ ಪಲ್ಟಿಯಾಗಿ ಬೈಕ್ ಮೇಲೆ ಬಿದ್ದಿದೆ.
ಕ್ಯಾಂಟರ್ ಬಿದ್ದ ರಭಸಕ್ಕೆ ಬೈಕ್ ಅಪ್ಪಚ್ಚಿಯಾಗಿ ವೆಂಕಟೇಶ್ ಮತ್ತು ಮಗಳು ವಿಕ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನಲ್ಲಿದ್ದ ಪತ್ನಿ ರೂಪಗೆ ತೀವ್ರ ತರವಾದ ಗಾಯಗಳಾಗಿ ಚಿಂತಾಜನಕ ಸ್ಥಿತಿ ತಲುಪಿದ್ದಾಳೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸರು ಕ್ರೈನ್ ಸಹಾಯದಿಂದ ಕ್ಯಾಂಟರ್ ಸರಿಸಿ ಮೃತದೇಹಗಳನ್ನು ಹೊರ ತೆಗೆದು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಅಪಘಾತವನ್ನು ವೀಕ್ಷಿಸಿದ ಸಾರ್ವಜನಿಕರು ಈಶ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅಧಿಕಾರಗಳ ವಿರುದ್ಧ ರೊಚ್ಚಿಗೆದ್ದಿದ್ದರು,
ಅಧಿಕಾರಿಗಳ ನಿರ್ಲಕ್ಷದಿಂದ ಇಂತಹ ಸಾವು ನೋವುಗಳು ಸಂಭವಿಸುತ್ತಿದ್ದು, ಈಶ ಸಂಸ್ಥೆಯು ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲದೆ ಜನರು ಹೈಸ್ಪೀಟ್ ನಲ್ಲಿ ಬಂದು ಹೆದ್ದಾರಿಯಲ್ಲಿ ತಿರುವು ಪಡೆಯುತ್ತಿರುವುದು ಅಪಘಾತಗಳಿಗೆ ಕಾರಣವಾಗಿದೆ. ಹೆಚ್ಚು ಅಪಘಾತಗಳು ಆಗುತ್ತಿರುವುದು ಈಶ ಫೌಂಡೇಶನ್ ಆದಮೇಲೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹೆದ್ದಾರಿಯಿಂದ ಈಶ ಫೌಂಡೇಶನ್ ತಿರುವಿಗೆ ಯಾವುದೇ ಸೂಚನೆ ಫಲಕ ಇಲ್ಲ. ಪ್ಲೈಓವರ್ ಅಥವಾ ಅಂಡರ್ ಪಾಸ್ ಇಲ್ಲ ಅದರಿಂದ ಹೆಚ್ಚಿನ ಅಪಘಾತಗಳಿಗೆ ಮುಖ್ಯ ಕಾರಣ ಆಗುತ್ತಿದೆ.
ಯುಗಾದಿ ಹಬ್ಬದಿಂದ ಸುಮಾರು 15 ಅಪಘಾತಗಳಾಗಿದ್ದು ಯಾವ ಜನಪ್ರತಿನಿಧಿಯು, ಯಾವ ಅಧಿಕಾರಿಗಳು ಇತ್ತ ಗಮನ ಕೊಡುತ್ತಿಲ್ಲ, ಹೋದ ಪ್ರಾಣಕ್ಕೆ ಬೆಲೆ ಇಲ್ಲದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಪಟ್ಟಂತ ಇಲಾಖೆಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ, ಈ ಸ್ಥಳದಲ್ಲಿ ಪ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಿಸಿ ಸಾರ್ವಜನಿಕರ ಪ್ರಾಣಕ್ಕೆ ರಕ್ಷಣೆಯನ್ನು ಕೊಡಬೇಕು. ಮತ್ತು ಓವರ್ ಟೆಕ್ ಮಾಡುವ ವಾಹನಗಳನ್ನು ಆರ್ ಟಿ ಓ ಅಧಿಕಾರಿಗಳು ಗಮನ ಹರಿಸಿ ಅಂಥಹವುಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.