ದೊಡ್ಡಬಳ್ಳಾಪುರ: ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ನಿರ್ದೇಶಕ ಸ್ಥಾನದ ಚುನಾವಣೆ ಇಂದು ನಡೆಯಲಿದೆ ದೊಡ್ಡಬಳ್ಳಾಪುರ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಇಬ್ಬರು ಆನಂದ್ ಸ್ಪರ್ಧೆ ಮಾಡುತ್ತಿದ್ದಾರೆ.
ಬೆಂಗಳೂರು ಡೇರಿ ವೃತ್ತ ಸಮೀಪ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆಯಲಿದ್ದು, ಬಳಿಕ ಮತ ಎಣಿಕೆ ನಡೆಯಲಿದೆ.
ಈ ಹಿಂದೆ ಕಾಂಗ್ರೆಸ್ನಿಂದ ಬಮೂಲ್ ನಿರ್ದೇಶಕರಾಗಿ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗ ಬಿಜೆಪಿ ಬೆಂಬಲದ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಬಿ.ಸಿ.ಆನಂದಕುಮಾರ್ ಅವರು ಕಣದಲ್ಲಿದ್ದಾರೆ.
ಇವರೊಂದಿಗೆ ಜೆಡಿಎಸ್ ಬೆಂಬಲಿತರಾಗಿ ಹುಸ್ಕೂರು ಟಿ ಆನಂದ್ ಅವರು ಸ್ಪರ್ಧಿಸಿರುವ ಮತ್ತೋರ್ವ ಅಭ್ಯರ್ಥಿಯಾಗಿದ್ದಾರೆ.
ಅಚ್ಚರಿ ಎಂಬಂತೆ ಈ ಚುನಾವಣೆಯಲ್ಲಿ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಣಾಹಣಿ ನಡೆಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸಿದೆ.
ತಾಲ್ಲೂಕಿನ ಐದು ಹೋಬಳಿಗಳ ಪೈಕಿ ಮಧುರೆ ಹೋಬಳಿ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಉಳಿದಂತೆ ತೂಬಗೆರೆ, ಕಸಬಾ, ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿ ದೊಡ್ಡಬಳ್ಳಾಪುರ ಬಮೂಲ್ ನಿರ್ದೇಶಕ ಕ್ಷೇತ್ರಕ್ಕೆ ಸೇರಿದೆ.
ನಿರ್ದೇಶಕ ಸ್ಥಾನಕ್ಕೆ ಮತ ಚಲಾಯಿಸುವ ಹಕ್ಕನ್ನು 202 ಜನ ಹೊಂದಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಬ್ಬ ನಿರ್ದೇಶಕ ಅಥವಾ ಅಧ್ಯಕ್ಷರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.
ಈಗಾಗಲೇ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ರಾಜಕೀಯ ತಂತ್ರ, ಪ್ರತಿ ತಂತ್ರ ಮಾಡಿದ್ದು, ವಿಜಯಲಕ್ಷ್ಮಿ ಯಾವ ಆನಂದ್ಗೆ ಆನಂದ ತರಲಿದೆ ಎಂಬ ಫಲಿತಾಂಶ ಇಂದು ಸಂಜೆಯ ವೇಳೆಗೆ ತಿಳಿದು ಬರಲಿದೆ.