ಚಿಕ್ಕಬಳ್ಳಾಪುರ: ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಜಿಲ್ಲೆಯಾದ್ಯಂತ ಸಾಮಾಜಿಕ ಭದ್ರತಾ ಯೋಜನೆಯಡಿ ಕಳೆದ ಜುಲೈ 26 ರಿಂದ ಪಿಂಚಣಿ ಆಂದೋಲನ ಕೈಗೊಂಡು ಒಂದೇ ತಿಂಗಳಲ್ಲಿ ಹೊಸದಾಗಿ 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿರುತ್ತದೆ ಎಂದು ತಿಳಿಸಿ, ಈ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರನ್ನು ಜಿಲ್ಲಾಧಿಕಾರಿ ಆರ್.ಲತಾ ಅವರು ಶ್ಲಾಘಿಸಿದ್ದಾರೆ.
ಅವರು ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡುತ್ತಾ, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ರವರು ಕೋವಿಡ್ ಸಂಕಷ್ಟದ ಅವಧಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿಯ ವಿವಿಧ ಪಿಂಚಣಿಗಳಿಗೆ ಹೊಸದಾಗಿ ಸೃಜನೆಯಾಗುವ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕಾರ್ಯವು ಸ್ಥಗಿತವಾಗಬಾರದು ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು ಹಾಗೂ ಈ ಯೋಜನೆಯಡಿ ಜಿಲ್ಲೆಯ ಯಾವೊಬ್ಬ ಅರ್ಹ ವ್ಯಕ್ತಿಯೂ ಪಿಂಚಣಿಯಿಂದ ವಂಚಿತರಾಗಬಾರದು, ಕೋವಿಡ್ ದುಸ್ಥಿತಿಯ ಸಂದಿಗ್ಧ ಸಮಯದಲ್ಲಿ ಜನರನ್ನು ಕಚೇರಿಗಳಿಗೆ ಅಲೆದಾಡದಂತೆ ನೋಡಿಕೊಳ್ಳಬೇಕು ಈ ಮಧ್ಯೆ ಹೊಸದಾಗಿ ಸೃಜನೆಯಾಗುವ ಅರ್ಹ ಫಲಾನುಭವಿಗಳಿಗೆ ಪಿಂಚಣಿಯ ಮಂಜೂರು ಕಾರ್ಯವೂ ಸಹ ನಿಲ್ಲಬಾರದು.
ಕೋವಿಡ್ ಅವಧಿಯಲ್ಲಿ ಹಲವು ಅಂಗವಿಕಲರು, ವಯೋವೃದ್ಧರು, ಪರಿತ್ಯಕ್ತ ಅಶಕ್ತ ಮಹಿಳೆಯರು,ವಿಧವೆಯರ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಜೀವನೋಪಾಯಕ್ಕೆ ತೊಡಕಾಗಿರುವ ಎಲ್ಲಾ ಅಂಶಗಳನ್ನು ಮನಗಂಡ ಜಿಲ್ಲಾಡಳಿತ ಕೋವಿಡ್ ಸಂಕಷ್ಟದ ಅವಧಿಯಲ್ಲಿ ಅಲ್ಪ ಮಟ್ಟದ ಸಹಾಯ ಸರ್ಕಾರದಿಂದ ಆಗಲಿ ಎಂದು ಪಿಂಚಣಿ ಆಂದೋಲನವನ್ನು ಕಳೆದ ಜುಲೈ 26 ರಿಂದ ಆರಂಭಿಸಿತ್ತು ಎಂದರು.
ಮನೆ ಬಾಗಿಲಿಗೆ ಕಂದಾಯ ಇಲಾಖೆ: ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪಿಂಚಣಿ ಆಂದೋಲನದಡಿ ಕಾರ್ಯೋನ್ಮುಖರಾಗಿ ಗ್ರಾಮ /ವಾರ್ಡವಾರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಅರ್ಹರಿದ್ದು ಸಹ ಯಾರಿಗೆ ಪಿಂಚಣಿ ಸೌಲಭ್ಯ ದೊರಕದ ಜನರಿಂದ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಪಡೆದು 13,546 ಅರ್ಜಿಗಳನ್ನು ಸ್ವೀಕರಿಸಿದ್ದರು. ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿರುವ 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿರುತ್ತದೆ ಉಳಿದ 2,110 ಅರ್ಜಿಗಳು ಅನರ್ಹಗೊಂಡಿರುತ್ತವೆ. ಪಿಂಚಣಿ ಮಂಜೂರಾಗಿರುವ 11,436 ಫಲಾನುಭವಿಗಳ ಪೈಕಿ ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ವಾರ ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ವೇಳೆ ಕೆಲವು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿದ್ದಾರೆ. ಒಟ್ಟಾರೆ ಆಂದೋಲನ ಆರಂಭವಾದ ಮೇಲೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 300ಕ್ಕೂ ಹೆಚ್ಚು ಫಲನುಭವಿಗಳಿಗೆ ಪಿಂಚಣಿ ಆದೇಶ ಪತ್ರಗಳನ್ನು ವಿತರಿಸಲಾಗಿದೆ. ಇನ್ನುಳಿದ ಪಿಂಚಣಿ ಆದೇಶ ಪತ್ರಗಳನ್ನು ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಎಲ್ಲಾ ತಾಲ್ಲೂಕುಗಳಲ್ಲಿಯೂ ವಿತರಿಸಲಾಗುತ್ತಿದೆ. ವಿತರಣಾ ಕಾರ್ಯ ಚಾಲ್ತಿಯಲ್ಲಿದ್ದು ಅತಿ ಶೀಘ್ರದಲ್ಲೇ ಮುಗಿಯಲಿದೆ ಎಂದು ಭರವಸೆ ನೀಡಿದರು.
13 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ: ಸ್ವೀಕೃತವಾದ 13,546 ಅರ್ಜಿಗಳ ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1597, ಗೌರಿಬಿದನೂರು ತಾಲೂಕಿನಲ್ಲಿ 3950, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2818, ಬಾಗೇಪಲ್ಲಿ ತಾಲೂಕಿನಲ್ಲಿ 1969, ಗುಡಿಬಂಡೆ ತಾಲೂಕಿನಲ್ಲಿ 701 ಮತ್ತು ಚಿಂತಾಮಣಿ ತಾಲೂಕಿನಲ್ಲಿ 2511 ಅರ್ಜಿಗಳು ಸ್ವೀಕೃತವಾಗಿರುತ್ತವೆ. ಸ್ವೀಕೃತವಾಗಿರುವ ಈ ಅರ್ಜಿಗಳ ಪೈಕಿ ವೃದ್ಧಾಪ್ಯ ವೇತನದಡಿ 5,439, ಸಂಧ್ಯಾ ಸುರಕ್ಷ ಯೋಜನೆಯಡಿ 3,954, ನಿರ್ಗತಿಕ ವಿಧವಾ ವೇತನದಡಿ 1,198, ವಿಕಲಚೇತನರ ವೇತನದಡಿ 584, ಮನಸ್ವಿನಿ ಯೋಜನೆಯಡಿ 252 ಮತ್ತು ಮೈತ್ರಿ ಯೋಜನೆಯಡಿ 9 ಅರ್ಜಿಗಳು ಸೇರಿದಂತೆ ಒಟ್ಟು 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿರುತ್ತದೆ ಆಂದೋಲನದಲ್ಲಿ ಅರ್ಜಿ ಸ್ವೀಕಾರದ ಜೊತೆಗೆ ಬೆರಳಚ್ಚು ಚಹರೆ ಸಿಗದೆ ಸ್ಥಗಿತಗೊಂಡಿದ್ದವರ ವಿವರವನ್ನು ಪರಿಶೀಲಿಸಿ ಪಿಂಚಣಿಯನ್ನು ಮರುಚಾಲ್ತಿಗೊಳಿಸಲಾಯಿತು ಹಾಗೂ ಪಿಂಚಣಿಯೊಂದಿಗೆ ಆಧಾರ್ ಕಾರ್ಡ್ ಜೋಡಣಾ ಕಾರ್ಯವನ್ನು ಸಹ ಮಾಡಲಾಯಿತು ಎಂದರು.
ಜಿಲ್ಲೆಯ ಮಟ್ಟಿಗೆ ದಾಖಲೆಯ ಸಾಧನೆ: ಸಾಮಾಜಿಕ ಭದ್ರತಾ ಯೋಜನೆಯಡಿ ಆರಂಭದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 2,13,216 ಫಲಾನುಭವಿಗಳಿಗೆ ವಿವಿಧ ರೀತಿಯ ಪಿಂಚಣಿಗಳನ್ನು ಮಂಜೂರಾತಿ ಮಾಡಲಾಗಿದೆ. ಕಳೆದ ಜುಲೈ ಮಾಹೆಯಲ್ಲಿ ಕೈಗೊಂಡ ಪಿಂಚಣಿ ಆಂದೋಲನದಲ್ಲಿ ಒಟ್ಟು 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲು ಒಂದೇ ತಿಂಗಳಲ್ಲಿ ಕ್ರಮ ಕೈಗೊಂಡಿರುವುದು ಉತ್ತಮ ಸಾಧನೆಗೆ ಸಾಕ್ಷಿಯಾಗಿದೆ. ಒಂದು ತಿಂಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪಿಂಚಣಿ ಆದೇಶ ಪತ್ರಗಳನ್ನು ವಿತರಿಸುತ್ತಿರುವುದು ಜಿಲ್ಲೆಯ ಮಟ್ಟಿಗೆ ದಾಖಲೆ ಆಗಿದೆ. ನಮಗಿರುವ ಮಾಹಿತಿ ಪ್ರಕಾರ ಅತಿ ಕಡಿಮೆ ಅವಧಿಯಲ್ಲಿ ಈ ಪ್ರಮಾಣದಲ್ಲಿ ಯಾವ ಜಿಲ್ಲೆಯಲ್ಲಿಯೂ ಸಹ ಪಿಂಚಣಿ ಮಂಜೂರು ಮಾಡಿರಲಿಕ್ಕಿಲ್ಲ ಎಂದು ತಿಳಿಸಿ ಆಂದೋಲನವನ್ನು ಯಶಸ್ವಿಗೊಳಿಸಲು ಶ್ರಮಿಸಿದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್ ಗಳು ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳನ್ನು ಶ್ಲಾಘಿಸಿದರು. ವಿಶೇಷವಾಗಿ ಈ ಕಾರ್ಯಕ್ಕೆ ಅವಿರತ ಶ್ರಮಿಸಿದ ಗ್ರಾಮ ಲೆಕ್ಕಿಗರು ಮತ್ತು ಗ್ರಾಮ ಸಹಾಯಕರಿಗೆ ಅಭಿನಂದನೆಗಳನ್ನು ತಿಳಿಸಿದರು ಮತ್ತು ಸಹಕರಿಸಿದ ಸಮಸ್ತ ಜನತೆಗೆ ಧನ್ಯವಾದಗಳನ್ನು ತಿಳಿಸಿದರು.
ಸೃಜನೆಯಾಗುವವರನ್ನ ಗುರ್ತಿಸಿ ಪಿಂಚಣಿ ನೀಡಿ: ಸಾಮಾಜಿಕ ಭದ್ರತಾ ಯೋಜನೆಯಡಿಯ ಪಿಂಚಣಿ ಯೋಜನೆಗಳು ನಿರಂತರವಾಗಿ ಚಾಲ್ತಿಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಈ ಯೋಜನೆಯಡಿ ಸೃಜನೆಯಾಗುವ ಅರ್ಹರಿಗೂ ಸಹ ಕಾಲ ವಿಳಂಭವಿಲ್ಲದೆ ಪಿಂಚಣಿ ಮಂಜೂರಾತಿಗೆ ಅಗತ್ಯ ಕ್ರಮ ವಹಿಸಬೇಕು ಹಾಗೂ ಮುಂದಿನ ದಿನಗಳಲ್ಲಿಯೂ ಯಾವೊಬ್ಬ ಅರ್ಹರು ಪಿಂಚಣಿಯಿಂದ ವಂಚಿತರಾಗಿದ್ದೇವೆಂದು ಸರ್ಕಾರಿ ಕಚೇರಿಗೆ ಬರುವ ಮೊದಲೆ ಅವರನ್ನು ಗ್ರಾಮ /ವಾರ್ಡ್ ಮಟ್ಟದಲ್ಲೇ ಗುರುತಿಸಿ ಪಿಂಚಣಿ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಈ ನಿಟ್ಟಿನಲ್ಲಿ ಎಲ್ಲಾ ತಹಸೀಲ್ದಾರ್ ಗಳು ನಿಗಾವಹಿಸಬೇಕೆಂದು ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..